ಕುಡಿದ ಮತ್ತಿನಲ್ಲಿ ನೇಣು ಹಾಕಿಕೊಳ್ಳಲು ಮುಂದಾದ ವ್ಯಕ್ತಿಯ ಪ್ರಾಣ ಉಳಿಸಿದ ಪೊಲೀಸ್

ಹುಬ್ಬಳ್ಳಿ, ಜುಲೈ.14: ಆತ್ಮಹತ್ಯೆಗೆ ಮುಂದಾಗಿದ್ದ ವ್ಯಕ್ತಿಯ ಜೀವವನ್ನು ಪೊಲೀಸರು ಉಳಿಸಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದಲ್ಲಿ ನಡೆದಿದೆ. ನೆಲ್ಲಿಹರವಿ ಗ್ರಾಮದ ಶಂಭುಲಿಂಗಯ್ಯ ಹುಲಸೋಗಿ ಕುಡಿದ ಮತ್ತಿನಲ್ಲಿ ನೇಣಿಗೆ ಮುಂದಾಗಿದ್ದ. ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಈ ವೇಳೆ 112ಗೆ ಕರೆ ಬಂದ ಹಿನ್ನಲೆ ಅಲರ್ಟ್ ಆದ ಪೊಲೀಸರು, ತಕ್ಷಣವೇ ಸ್ಥಳಕ್ಕೆ ಧಾವಿಸಿ ನೇಣಿಕೆ ಕೊರಳೊಡ್ಡಿದ ಶಂಭುಲಿಂಗಯ್ಯ ಪ್ರಾಣ ಉಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿ ಗಣೇಶ್ ಹಾಗೂ ಸಂಗನಗೌಡರವರು ಶಂಭುಲಿಂಗಯ್ಯ ಅವರನ್ನು ರಕ್ಷಿಸಿದ್ದಾರೆ. ಸದ್ಯ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ಶಂಭುಲಿಂಗಯ್ಯಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.