ಕಾರವಾರ ತಾಲೂಕಿನಾದ್ಯಂತ ಮಳೆಗೆ ಪ್ರವಾಹ ಸೃಷ್ಟಿ; ಬೋಟ್ ಮೂಲಕ ಜನರ ರಕ್ಷಣೆ

ಕಾರವಾರ, ಜುಲೈ.14: ಕಳೆದ ನಾಲ್ಕು ದಿನದಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಅಬ್ಬರಿಸ್ತಿದೆ. ಮಳೆ ನಿರಂತರವಾಗಿ ಸುರಿಯುತ್ತಲೇ ಇದೆ. ನಿತ್ಯ ಸುರಿಯುತ್ತಿರೋ ರಣ ಮಳೆ, ಕಾರಾವಾರ ಜನರನ್ನ ಹಿಂಡಿ ಹಿಪ್ಪೆ ಮಾಡಿದೆ. ಜಮೀನು, ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಕಾರಾವಾರ ತಾಲೂಕಿನ ಚಂಡಿಯಾ, ಕೋಲ್ ಚಂಡಿಯಾ, ಇಳಸೂರು ಭಾಗದಲ್ಲಿ ಭಾರೀ ಮಳೆಯಾಗ್ತಿದ್ದು, ಮನೆ, ರಸ್ತೆ ಕೃಷಿ ಜಮೀನು ಜಲಾವೃತವಾಗಿದೆ.

ಐಸ್‌ ಫ್ಯಾಕ್ಟರಿ ಬಳಿ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೂರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ. ಮನೆಗಳಿಗೂ ನೀರು ನುಗ್ಗಿ, ಮನೆಯಿಂದಾಚೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಕಂಗಲಾಗಿರೋ ಜನರು, ನಮ್ಮ ಕಷ್ಟ ಕೇಳರೋ ಯಾರು ಇಲ್ಲ ಅಂತಾ ಆಕ್ರೋಶ ಹೊರಹಾಕ್ತಿದ್ದಾರೆ.

ಅರಗ ಗ್ರಾಮದಲ್ಲೂ ಭಾರೀ ಮಳೆಯಾಗಿದ್ದು, ಡಾಬಾಗೆ ನೀರು ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನೀರು ಹೋಗಲು ಜಾಗವಿಲ್ಲದೇ ಡಾಬಾಗೆ ನುಗ್ಗುತ್ತಿದೆ. ಇನ್ನೂ ಗೋಕರ್ಣದ ತಾರಮಕ್ಕಿ ಸರ್ಕಾರಿ ಶಾಲೆ ಬಳಿ ಗುಡ್ಡ ಕುಸಿತವಾಗಿದೆ. ರಸ್ತೆಯಲ್ಲಿ ಮಣ್ಣು ಕುಸಿತು ಸಂಚಾರ ಅಸ್ತವ್ಯಸ್ತಗೊಂಡಿದೆ.

ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಬೋಟ್ ಮೂಲಕ ರಕ್ಷಣೆ

ಇನ್ನು ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ವ್ಯಾಪ್ತಿಯಲ್ಲಿ ಪ್ರವಾಹದಲ್ಲಿ ಜನರು ಸಿಲುಕಿದ್ದರು. ಮನೆಗಳಲ್ಲಿ ಸಿಲುಕಿದ್ದ 5 ಕುಟುಂಬಗಳನ್ನು ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಯ ಅಂದಾಜು ಗೊತ್ತಾಗದೆ ನಿವಾಸಿಗಳು ಮನೆಯಲ್ಲೇ ಉಳಿದಿದ್ರು. ಕಳೆದ 4 ದಿನಗಳ ಹಿಂದೆ ಸುರಿದ ಮಳೆಗೆ ಇಷ್ಟೊಂದು ನೀರು ಬಂದಿರಲಿಲ್ಲ. ಆದ್ರೆ ಇಂದು ಹೆಚ್ಚು ನೀರು ಬಂದಿದ್ದರಿಂದ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ರಸ್ತೆಗಳು ಹಾಗೂ ಜಮೀನುಗಳು ಸಂಪೂರ್ಣವಾಗಿ ಜಲಾವೃತವಾದ ಹಿನ್ನೆಲೆ ರಸ್ತೆ ಯಾವುದು ಅಂತಾ ಗೊತ್ತಾಗದೆ ಮನೆಯಲ್ಲೇ ಕಾಲ ಕಳೆಯುವಂತಾಗಿತ್ತು. ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ಆತಂಕದಲ್ಲೇ ಕಾಲ ಕಳೆಯುತ್ತಿದ್ದರು. ಗ್ರಾಮಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ಬೋಟ್ ಮೂಲಕ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳೀಯರು ಕರೆತಂದಿದ್ದಾರೆ.