ಮುರುಘಾಮಠದಲ್ಲಿದ್ದ ಮುರುಘಾ ಶ್ರೀ ಬೆಳ್ಳಿ ಪುತ್ಥಳಿ ಕಳ್ಳತನ

ಚಿತ್ರದುರ್ಗ, ಜು.11: ಮುರುಘಾಮಠದಲ್ಲಿದ್ದ ಮುರುಘಾ ಶ್ರೀ ಬೆಳ್ಳಿ ಪುತ್ಥಳಿಯನ್ನು ಖದೀಮರು ಕಳ್ಳತನ ಮಾಡಿರುವ ಘಟನೆ ನಡೆದಿದ್ದು, ಈ ಕುರಿತು ಚಿತ್ರದುರ್ಗದ ಮುರುಘಾ ಮಠದಲ್ಲಿ ಮಾತನಾಡಿದ ದಾವಣಗೆರೆಯ ವಿರಕ್ತಮಠದ ಬಸವಪ್ರಭುಶ್ರೀ, ‘ಜೂ.26 ರಿಂದ ಮಠದ ದರ್ಬಾರ್ ಹಾಲ್​ನಲ್ಲಿ ಸಿಸಿಟಿವಿ ಆಫ್ ಆಗಿದೆ. ಈ ವೇಳೆ ದರ್ಬಾರ್ ಹಾಲ್​ನಲ್ಲಿದ್ದ 20 ಲಕ್ಷ ಮೌಲ್ಯದ 20 ಕೆಜಿ ತೂಕದ ಬೆಳ್ಳಿ ಪುತ್ಥಳಿ ಕಳ್ಳತನ ಆಗಿದೆ. ಈ ಕುರಿತು ಆಡಳಿತ ಮಂಡಳಿ ಸದಸ್ಯ ಬಸವಕುಮಾರಶ್ರೀ ಪೊಲೀಸರಿಗೆ ದೂರು ನೀಡುತ್ತಾರೆ ಎಂದರು.

ಪೊಲೀಸರು ತನಿಖೆ ನಡೆಸಿ ಕಳ್ಳತನ ಪ್ರಕರಣ ಬೇಧಿಸಬೇಕಿದೆ

ಇನ್ನು ಮಠದ ಆಡಳಿತ ಸಮಿತಿ ಸದಸ್ಯ ಬಸವಕುಮಾರಶ್ರೀ ಮಾತನಾಡಿ, ‘ನಿನ್ನೆ(ಬುಧವಾರ) ಮುರುಘಾಶ್ರೀಗಳ ಬೆಳ್ಳಿ ಪುತ್ಥಳಿ ಕಳವು ಬಗ್ಗೆ ಬಸವಪ್ರಭುಶ್ರೀಗಳು ಮಾಹಿತಿ ನೀಡಿದರು. ನಾವು ಕೂಡಲೇ ಮಠದ ಆಡಳಿ ಮಂಡಳಿ ಅಧ್ಯಕ್ಷರಿಗೆ ತಿಳಿಸಿದೆವು. ಜೊತೆಗೆ ನಿವೃತ್ತ ಐಎಎಸ್ ಅಧಿಕಾರಿ ಆಗಿರುವ ಶಿವಯೋಗಿ ಕಳಸದ್​ ಅವರಿಗೆ ಮಾಹಿತಿ ನೀಡಿದೆವು. ಕಳಸದ್ ಸೂಚನೆಯಂತೆ ಆಂತರಿಕ ತನಿಖೆ ನಡೆಸಿದ್ದೇವೆ. ಬೆಳ್ಳಿ ಪುತ್ಥಳಿ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇಂದು ಮಧ್ಯಾಹ್ನ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸುತ್ತೇವೆ. ಪೊಲೀಸ್ ತನಿಖೆಯಿಂದ ಬೆಳ್ಳಿ ಪುತ್ಥಳಿ ಕಳ್ಳತನ ಕೇಸ್ ಬಯಲಾಗಬೇಕಿದೆ ಎಂದು ಸ್ಪಷ್ಟನೆ ನೀಡಿದರು.