ಕರ್ನಾಟಕದಲ್ಲಿ ಜೆಡಿಎಸ್ ಹುಟ್ಟಿದ ಕಥೆ ಹೇಳಿದ ಸಿದ್ದರಾಮಯ್ಯ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜೆಡಿಎಸ್​ ಹುಟ್ಟಿದ ಕಥೆ ಹೇಳಿದ್ದಾರೆ. ಜೆಡಿಎಎಸ್ ಹೇಗೆ ಶುರುವಾಯ್ತು? ಯಾವಾಗ? ಯಾರಿಂದ ಎನ್ನುವುದನ್ನು ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಹಾಸ್ಯ ಭರಿತವಾಗಿ ಹೇಳಿದ್ದಾರೆ. ಅಲ್ಲದೇ ಜೆಡಿಎಸ್​ ಸಂಸ್ಥಾಪಕ ತಾವೇ ಎಂದು ಹೇಳಿದ್ದಾರೆ.

ಮೈಸೂರು, ಏಪ್ರಿಲ್ 02 : ಜೆಡಿಎಸ್ ಹುಟ್ಟಿದ್ದು ಹೇಗೆ ಗೊತ್ತ? 2009 ರಾಮಕೃಷ್ಣ ಹೆಗಡೆ, ಎಸ್.ಬೊಮ್ಮಾಯಿ ಸೇರಿದಂತೆ ಅನೇಕರು ಜನತಾದಳ ಬಿಟ್ಟು ಹೋದರು. ಬಳಿಕ ಬಿಜೆಪಿ ಜೊತೆ ಸೇರಿಕೊಂಡು ಜೆಡಿಯು ಮಾಡಿಕೊಂಡ್ರು‌. ಆಗ ನಾನು (ಸಿದ್ದರಾಮಯ್ಯ) ಎಚ್.ಡಿ.ದೇವೇಗೌಡರ ಬಳಿ ಹೋಗಿ ಜೆಡಿಎಸ್ ಮಾಡೋಣ ಎಂದು ಹೇಳಿದೆ. ನಂತರ ಜೆಡಿಎಸ್ ಹುಟ್ಟಿಕೊಂಡಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಜೆಡಿಎಸ್​ ಹುಟ್ಟಿದ ಕಥೆ ಹೇಳಿದರು. ಈ ಮೂಲಕ ಪರೋಕ್ಷವಾಗಿ ಕರ್ನಾಟಕದಲ್ಲಿ ಜೆಡಿಎಸ್​ ಹುಟ್ಟು ಹಾಕಿದ್ದೆ ತಾವು ಎನ್ನುವ ಅರ್ಥದಲ್ಲಿ ಹೇಳಿದರು.

ಮೈಸೂರಿನಲ್ಲಿ ಇಂದು (ಏಪ್ರಿಲ್ 02) ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2009 ರಾಮಕೃಷ್ಣ ಹೆಗಡೆ, ಎಸ್.ಬೊಮ್ಮಾಯಿ ಸೇರಿದಂತೆ ಅನೇಕರು ಜನತಾದಳ ಬಿಟ್ಟು ಹೋದರು. ಆಗ ನಾನು (ಸಿದ್ದರಾಮಯ್ಯ) ದೇವೇಗೌಡರ ಬಳಿ ಹೋಗಿ ಜೆಡಿಎಸ್ ಮಾಡೋಣ ಎಂದು ಹೇಳಿದೆ. ನಂತರ ಜೆಡಿಎಸ್ ಹುಟ್ಟಿಕೊಂಡಿತು. ನಾನು ಜೆಡಿಎಸ್ ಸಂಸ್ಥಾಪಕ ಅಧ್ಯಕ್ಷ. ನಂತರ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ರು. ಜೆಡಿಎಸ್‌ನಿಂದ ನನಗೆ ಅನ್ಯಾಯ ಆಗಿದೆ ಎಂದು ಹೇಳಿದರು.

ಬಿಜೆಪಿಯವರು ಜೆಡಿಎಸ್ ಜೊತೆ ಶಾಮಿಲ್ ಆಗಿದ್ದಾರೆ. 2018ರಲ್ಲಿ ಸಮಿಶ್ರ ಸರ್ಕಾರ ಜಾರಿಗೆ ಬಂತು. ಕುಮಾರಸ್ವಾಮಿ ಸಿಎಂ ಆಗಿದ್ದರು. ಬಿಜೆಪಿಗೆ ಹೋಗಬಾರದು ಅಂತ ಅವರನ್ನೇ ಸಿಎಂ ಮಾಡಲಾಗಿತ್ತು. ದೇವೇಗೌಡರು ಸಹ ಒಪ್ಪಿಕೊಂಡು ಬಿಜೆಪಿ ಜೊತೆ ಹೋಗಲ್ಲ ಅಂದ್ರು. ಒಂದು ವರ್ಷ ಎರಡು ತಿಂಗಳು ಚೆನ್ನಾಗಿತ್ತು. ಸಮಿಶ್ರ ಸರ್ಕಾರ ತೆಗೆದಿದ್ದು ಮಿಸ್ಟರ್ ಯಡಿಯೂರಪ್ಪ. ಈಗ ಅವರ ಜೊತೆಯೇ ಬಾಯಿ ಬಾಯಿ ಎಂದು ಹೋಗಿದ್ದಾರೆ. ಕುಮಾರಸ್ವಾಮಿ ಸರ್ಕಾರ ತೆಗೆದವರ ಜೊತೆ ದೇವೇಗೌಡರು ನಂಗು ಮೋದಿ ಅವರಿಗೆ ಅವಿನಾಭಾವ ಸಂಬಂಧ ಇದೆ ಎಂದು ಹೇಳಿದ್ದಾರೆ. ನಾನು ದೇವೇಗೌಡರ ಜೊತೆ ಹಲವು ವರ್ಷಗಳ ಕಾಲ ಇದ್ದವನು. 2009ರಲ್ಲಿ ಜನತಾದಳ ವಿಭಜಯನೆಯಾತು. ಬೈರೇಗೌಡರು, ಬೊಮ್ಮಾಯಿ ಎಲ್ಲಾ ಜೆ.ಎಚ್.ಪಟೇಲ್ ಜೊತೆ ಹೊದ್ರು. ನಾವು ಹೋಗಲಿಲ್ಲ. ನಾನು ದೇವೇಗೌಡರು ಎಲ್ಲಾ ಸೇರಿ ಜೆಡಿಎಸ್ ಮಾಡಿದ್ವಿ‌. ನಾನು ಜೆಡಿಎಸ್ ನ ಫೌಂಡರ್ ಪ್ರೆಸೆಡಿಂಟ್. ದೇವೇಗೌಡರು ನ್ಯಾಷನಲ್ ಪ್ರೆಸಿಡೆಂಟ್ ಆಗಿದ್ರು. ನಾನು ಆರು ವರ್ಷ ಪಕ್ಷ ಕಟ್ಟಿದ್ದೇನೆ. ಆದ್ರೆ, ಜೆಡಿಎಸ್ ಪಕ್ಷದಿಂದ ನನ್ನನ್ನೆ ತೆಗೆದ್ರು ಎಂದು ಜೆಡಿಎಸ್​ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ಅನ್ನು ನಾನು ಬಿಡಿಲಿಲ್ಲ. ಮಿಸ್ಟರ್ ದೇವೇಗೌಡ ನಮ್ಮನ್ನು ಉಚ್ಚಾಟಿಸಿ ಹೊರಗೆ ಕಳಿಸಿದರು. ಆದರೆ, ಈಗ ನಾನೇ ಜೆಡಿಎಸ್ ಬಿಟ್ಟು ಬಂದೆ ಅಂತಾ ಸುಳ್ಳು ಹೇಳುತ್ತಾರೆ. ಉಪಯೋಗಿಸಿ ಕೊಳ್ಳೋದು ಬಿಸಾಕುವುದು ಜೆಡಿಎಸ್ ಕೆಲಸ. ಬಿಜೆಪಿ ಕೋಮುವಾದಿ ಪಕ್ಷ. ಹೀಗಾಗಿ ಅವರ ಜೊತೆ ಹೋದ ಜೆಡಿಎಸ್ ಜಾತ್ಯತೀತ ಪದ ಕೈ ಬಿಡಲಿ ಅಂತಾ ಹೇಳಿದೆ. ಅದಕ್ಕೆ ನನ್ನ ಗರ್ವಭಂಗ ಮಾಡಿ ಅಂತಾ ದೇವೇಗೌಡರು ಹೇಳುತ್ತಾರೆ. 2006ರ ಚಾಮುಂಡೇಶ್ವರಿ ಉಪಚುನಾವಣೆ ನೀವು ನನ್ನ ಕೈ ಹಿಡಿಯದೆ ಇದ್ದಿದ್ದರೆ ನನ್ನ ರಾಜಕೀಯ ನಿರ್ಣಾಮ ಆಗುತ್ತಿತ್ತು. ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರು ಎಲ್ಲಾ ಸೇರಿ ನನ್ನ ಸೋಲಿಸೋಕೆ ಬಂದ್ರು. ಜನ ನನ್ನ ಕೈ ಬಿಡಲಿಲ್ಲ. ಹೀಗಾಗಿ ಎರಡು ಬಾರಿ ಸಿಎಂ ಆಗಿದ್ದೇನೆ ಎಂದು ಈ ಹಿಂದಿನ ರಾಜಕಾರಣವನ್ನು ಮೆಲುಕು ಹಾಕಿ ಜೆಡಿಎಸ್-ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರ ಕುಟುಂಬದವರು ಯಾರು ಈ ಬಾರಿ ಚುನಾವಣೆಯಲ್ಲಿ ಗೆಲ್ಲಲ್ಲ. ಡಾ.‌ ಮಂಜುನಾಥ್, ಪ್ರಜ್ವಲ್, ಎಚ್​ಡಿ ಕುಮಾರಸ್ವಾಮಿ ಎಲ್ಲರೂ ಸೋಲುತ್ತಾರೆ. ಕುಮಾರಸ್ವಾಮಿ, ದೇವೇಗೌಡರು ಬಂದು ಕಣ್ಣೀರು ಹಾಕಬಹುದು. ಅದಕ್ಕೆ ಕರಗಬೇಡಿ. ಮರುಗಬೇಡಿ ಎಂದು ಜನರಿಗೆ ಕಿವಿ ಮಾತು ಹೇಳಿದರು.

ಚುನಾವಣೆ ನಂತರ ಗ್ಯಾರಂಟಿ ನಿಲ್ಲಿಸುತ್ತಾರೆ ಅಂತಿದ್ದಾರೆ. ಯಾವ ಕಾರಣಕ್ಕೂ ಗ್ಯಾರಂಟಿಗಳನ್ನ ನಿಲ್ಲಿಸಲ್ಲ. ನಾವು ಬಿಜೆಪಿಯವರ ರೀತಿಯಲ್ಲ. ನಾವು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ಬಿಜೆಪಿಯವರಿಗೆ ಸುಳ್ಳೆ ಮನೆ ದೇವರು‌. ರಾಜಕೀಯ ಜ್ಞಾನ ಇರುವವರು ಲೋಕಸಭೆಗೆ ಹೋಗಬೇಕು. ಮೋದಿ ಅವರನ್ನ ಕಂಡ್ರೆ ಗಢಗಢ ಅಂತ ಹೆದರಿಕೊಳ್ಳುತ್ತಾರೆ. ಇಂಥವರನ್ನ ಲೋಕಸಭೆಗೆ ಕಳುಹಿಸಿದ್ರೆ ಕೆಲಸ ಮಾಡ್ತಾರಾ? ಲಕ್ಷ್ಮಣ್ ಧೈರ್ಯವಂತ, ಜನಪರ ಕಾಳಜಿ ಇರುವ ವ್ಯಕ್ತಿ. ಬಿಜೆಪಿಯವರು ಏನೂ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.