ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಬಡವರಿಗೆ ವಿಸ್ಕಿ, ಬಿಯರ್; ಮಹಾರಾಷ್ಟ್ರದ ಅಭ್ಯರ್ಥಿಯಿಂದ ಹೀಗೊಂದು ಭರವಸೆ

ಅತ್ಯಂತ ಬಡ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಮದ್ಯ ಕುಡಿದು ನೆಮ್ಮದಿ ಕಂಡುಕೊಳ್ಳುತ್ತಾರೆ. ಆದರೆ ಅವಿಗೆ ಗುಣಮಟ್ಟದ ವಿಸ್ಕಿ ಅಥವಾ ಬಿಯರ್ ಖರೀದಿಸಲು ಸಾಧ್ಯವಿಲ್ಲ. ಅವರು ಸ್ಥಳೀಯ ಮದ್ಯವನ್ನು ಮಾತ್ರ ಕುಡಿಯುತ್ತಾರೆ. ಅವರು ಸೇವಿಸುವ ಪ್ರಮಾಣಕ್ಕೆ ಯಾವುದೇ ಮಿತಿಯಿಲ್ಲ, ಆದ್ದರಿಂದ ಅವರು ಬೇಗನೆ ಸಾಯುತ್ತಾರೆ. ಆದ್ದರಿಂದ, ಅವರು ವಿದೇಶಿ ಮದ್ಯ ಕುಡಿದು ಆನಂದಿಸಬೇಕು ಎಂದು ನಾನು ಬಯಸುತ್ತೇನೆ ಎಂದ ಮಹಾರಾಷ್ಟ್ರದ ಅಭ್ಯರ್ಥಿ

ಮುಂಬೈ ಏಪ್ರಿಲ್ 01: ಮಹಾರಾಷ್ಟ್ರದ (Maharashtra) ಚಂದ್ರಾಪುರ ಕ್ಷೇತ್ರದಿಂದ ಅಖಿಲ ಭಾರತೀಯ ಮಾನವತಾ ಪಕ್ಷ ಅಭ್ಯರ್ಥಿ ವನಿತಾ ರಾವುತ್ (Vanita Raut) ಅವರು ‘ಬಡ ಮತದಾರರಿಗೆ’ ಭರ್ಜರಿ ಚುನಾವಣಾ ಭರವಸೆಯೊಂದನ್ನು ನೀಡಿದ್ದಾರೆ. ಅದೇನೆಂದರೆ 2024 ರ ಲೋಕಸಭೆ ಚುನಾವಣೆಯಲ್ಲಿ (Lok sabha Elections) ತಾನು ಗೆದ್ದು ಅಧಿಕಾರಕ್ಕೆ ಬಂದರೆ, ಬಡವರಿಗೆ ಸಬ್ಸಿಡಿ ವಿಸ್ಕಿ, ಬಿಯರ್ ನೀಡುವುದಾಗಿ ರಾವತ್ ಭರವಸೆ ನೀಡಿದ್ದಾರೆ. ಇದರ ಜೊತೆಗೆ, ಪ್ರತೀ ಹಳ್ಳಿಗಳಲ್ಲಿ ಬಿಯರ್ ಬಾರ್‌ಗಳನ್ನು ತೆರೆಯುವುದಲ್ಲದೆ, ಬಡವರಿಗೆ ವಿದೇಶಿ ವಿಸ್ಕಿ, ಬಿಯರ್ ಅನ್ನು ಉಚಿತವಾಗಿ ನೀಡುವುದಾಗಿ ಅವರು ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಅವರು, “ಜಹಾನ್ ಗಾಂವ್, ವಹಾ ಬಿಯರ್ ಬಾರ್. ಯಹೀ ಮೇರೆ ಮುದ್ದೇ ಹೈ (ಎಲ್ಲಿ ಗ್ರಾಮಗಳಿವೆಯೋ ಅಲ್ಲಿ ಬಿಯರ್ ಬಾರ್, ಅದೇ ನನ್ನ ಭರವಸೆ) ಎಂದಿದ್ದಾರೆ.” ವರದಿಯ ಪ್ರಕಾರ, ರಾವುತ್ ರೇಷನ್ ಅಂಗಡಿಗಳಲ್ಲಿ ವಿದೇಶಿ ಮದ್ಯ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿ ಮಾರಾಟಗಾರ ಮತ್ತು ಗ್ರಾಹಕ ಇಬ್ಬರಿಗೂ ಪರವಾನಗಿ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.

“ಅತ್ಯಂತ ಬಡ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಮದ್ಯ ಕುಡಿದು ನೆಮ್ಮದಿ ಕಂಡುಕೊಳ್ಳುತ್ತಾರೆ. ಆದರೆ ಅವಿಗೆ ಗುಣಮಟ್ಟದ ವಿಸ್ಕಿ ಅಥವಾ ಬಿಯರ್ ಖರೀದಿಸಲು ಸಾಧ್ಯವಿಲ್ಲ. ಅವರು ಸ್ಥಳೀಯ ಮದ್ಯವನ್ನು ಮಾತ್ರ ಕುಡಿಯುತ್ತಾರೆ. ಅವರು ಸೇವಿಸುವ ಪ್ರಮಾಣಕ್ಕೆ ಯಾವುದೇ ಮಿತಿಯಿಲ್ಲ, ಆದ್ದರಿಂದ ಅವರು ಬೇಗನೆ ಸಾಯುತ್ತಾರೆ. ಆದ್ದರಿಂದ, ಅವರು ವಿದೇಶಿ ಮದ್ಯ ಕುಡಿದು ಆನಂದಿಸಬೇಕು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.

2019 ರ ಚುನಾವಣೆಯ ಸಮಯದಲ್ಲಿ, ರಾವುತ್ ಅವರು ನಾಗ್ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ನಿತಿನ್ ಗಡ್ಕರಿ ವಿರುದ್ಧ ಕಣಕ್ಕಿಳಿದಿದ್ದರು. ಇಲ್ಲಿ ಗಡ್ಕರಿ ಗೆದ್ದಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅವರು ಚಿಮೂರ್ ಅಸೆಂಬ್ಲಿ ಸ್ಥಾನದಿಂದ ಸ್ಪರ್ಧಿಸಿದ್ದು ಬಿಜೆಪಿಯ ಬಂಟಿ ಭಂಗ್ಡಿಯಾ ವಿರುದ್ಧ ಸೋತಿದ್ದರು.

ಏತನ್ಮಧ್ಯೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳಿಗೆ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 31 ರಂದು, ಮಹಾರಾಷ್ಟ್ರದ ಬಿಜೆಪಿ ಕೋರ್ ಕಮಿಟಿಯ ಸದಸ್ಯರು ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಎಲ್ಲಾ 48 ಕ್ಷೇತ್ರಗಳ ಪರಿಶೀಲನೆಗಾಗಿ ಕ್ಲಸ್ಟರ್‌ಗಳ ಉಸ್ತುವಾರಿಗಳೊಂದಿಗೆ ಸಭೆ ನಡೆಸಿದರು. ಆಡಳಿತಾರೂಢ ಮೈತ್ರಿಕೂಟವು ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ, ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು ಒಳಗೊಂಡಿದೆ. ಅದೇ ವೇಳೆ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಯು ಉದ್ಧವ್ ಠಾಕ್ರಿ ನೇತೃತ್ವದ ಯುಬಿಟಿ, ಎನ್ ಸಿಪಿ (ಶರದ್ಚಂದ್ರ ಪವಾರ್) ಮತ್ತು ಕಾಂಗ್ರೆಸ್ ಪಕ್ಷವನ್ನು ಒಳಗೊಂಡಿದೆ.