ಅನಂತ್‌ ಕುಮಾರ ಹೆಗಡೆಯನ್ನು ಬಿಜೆಪಿಯಿಂದ ಉಚ್ಚಾಟಿಸಲಿ : ಸಚಿವ ಮಂಕಾಳ ವೈದ್ಯ‌ ಕಿಡಿ

ಕಾರವಾರ ಮಾರ್ಚ್‌ 11 : ಸಂವಿಧಾನ ತಿದ್ದುಪಡಿ ಮಾಡುವ ಮಾತುಗಳನ್ನಾಡುತ್ತಿರುವ ಸಂಸದ ಅನಂತ ಕುಮಾರ್‌ ಹೆಗಡೆ ಅವರನ್ನು ಬಿಜೆಪಿ ತಕ್ಷಣ ಉಚ್ಚಾಟಿಸಲಿ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು.

ಅನಂತಕುಮಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸದಿದ್ದರೆ ಬಿಜೆಪಿಯ ಸಂವಿಧಾನ ಬದಲಿಸುವ ರಹಸ್ಯ ಕಾರ್ಯಸೂಚಿ ಹೊಂದಿದೆ ಎಂಬುದು ಸ್ಪಷ್ಟವಾದಂತೆ ಎಂದು ಸೋಮವಾರ ಮಾಧ್ಯಮದವರ ಜೊತೆ ಮಾತನಾಡುತ್ತ ಹೇಳಿದರು.

ದೇಶದಲ್ಲಿ ಸಂವಿಧಾನ ಬದಲಿಸಿ, ಬ್ರಿಟಿಷ್‌ ಮಾದರಿಯ ಆಡಳಿತ ವ್ಯವಸ್ಥೆ ತರುವ ಉದ್ದೇಶ ಬಿಜೆಪಿಗೆ ಇದ್ದಂತಿದೆ. ದೇಶವನ್ನು ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ಮಾರುವ ಉದ್ದೇಶವೂ ಅವರಿಗೆ (ಬಿಜೆಪಿ) ಇದ್ದಿರಬಹುದು ಎಂಬುದು ಸಂಸದರ ಹೇಳಿಕೆಯಿಂದ ಅರ್ಥವಾಗುತ್ತಿದೆ ಎಂದು ಟೀಕಿಸಿದರು.

ಸಂಸದ ಅನಂತ ಕುಮಾರ ಹೆಗಡೆಯಾಗಲಿ, ನಾವಾಗಲಿ ಜನಪ್ರತಿನಿಧಿಗಳಾಗಿದ್ದು ಸಂವಿಧಾನದಿಂದ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಸಂವಿಧಾನವನ್ನೇ ಬದಲಿಸುವ ಮಾತುಗಳನ್ನಾಡುವುದು ಸರಿಯಲ್ಲ ಎಂದರು.