IND vs ENG 5th Test: ಇಂಗ್ಲೆಂಡ್ ಅನ್ನು ಆಲೌಟ್ ಮಾಡಿದ ಬಳಿಕ ಕುಲ್ದೀಪ್-ಅಶ್ವಿನ್ ನಡುವೆ ಜಗಳ: ವೈರಲ್ ವಿಡಿಯೋ

Kuldeep Yadav- Ravi Ashwin: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕುಲ್ದೀಪ್ ಯಾದವ್ ಐದು ವಿಕೆಟ್ ಕಿತ್ತರು. ಇಂಗ್ಲೆಂಡ್ ಆಲೌಟ್ ಆದ ಸಂದರ್ಭ ಅಂಪೈರ್‌ ಕುಲ್ದೀಪ್​ಗೆ ಪಂದ್ಯದ ಚೆಂಡನ್ನು ಸ್ಮರಣಿಕೆಯಾಗಿ ನೀಡಿದರು. ಆದರೆ, ಯುವ ಎಡಗೈ ಲೆಗ್ ಸ್ಪಿನ್ನರ್ ಈ ಚೆಂಡನ್ನು ರವಿಚಂದ್ರನ್ ಅಶ್ವಿನ್ ಅವರಿಗೆ ಹಸ್ತಾಂತರಿಸಲು ಮುಂದಾದರು. ಆಗ ಇಬ್ಬರ ನಡುವೆ ಮುದ್ದಾಗ ಜಗಳ ನಡೆದಿದೆ.

ಧರ್ಮಶಾಲಾದಲ್ಲಿ ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ಟೆಸ್ಟ್ ಪಂದ್ಯ ಪ್ರಾರಂಭವಾಗುವ ಮೊದಲಿದ್ದ ಊಹಾಪೋಹಗಳು ಸಂಪೂರ್ಣವಾಗಿ ತಪ್ಪಾಗಿದೆ. ಪಂದ್ಯದ ಮೊದಲ ದಿನ ಮಳೆಯಾಗಲಿ, ವೇಗದ ಬೌಲರ್‌ಗಳ ಅಬ್ಬರವಾಗಲಿ ಯಾವುದೂ ಇರಲಿಲ್ಲ. ದಿನವಿಡೀ ಮೈದಾನದಲ್ಲಿ ಉತ್ತಮ ಬಿಸಿಲು ಇತ್ತು ಮತ್ತು ಭಾರತೀಯ ಸ್ಪಿನ್ನರ್‌ಗಳು ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದರು. ಇಂಗ್ಲೆಂಡ್ ಅನ್ನು ಕೇವಲ 218 ರನ್‌ಗಳಿಗೆ ಆಲೌಟ್ ಮಾಡಿದರು. ಕುಲ್ದೀಪ್ ಯಾದವ್ ಮತ್ತು ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್‌ ಬ್ಯಾಟರ್​ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್​ಗೆ ಅಟ್ಟಿದರು.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ, ಆಂಗ್ಲರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ್ದು ಕುಲ್ದೀಪ್ ಯಾದವ್. ಕುಲ್ದೀಪ್ ತನ್ನ ಮಾರಕ ಸ್ಪಿನ್‌ನಿಂದ ಇಂಗ್ಲೆಂಡ್‌ನ ಮೊದಲ 6 ವಿಕೆಟ್‌ಗಳಲ್ಲಿ 5 ಅನ್ನು ಕಬಳಿಸಿ ದೊಡ್ಡ ಸ್ಕೋರ್‌ನ ನಿರೀಕ್ಷೆಯನ್ನು ಕೊನೆಗೊಳಿಸಿದರು. ಏತನ್ಮಧ್ಯೆ, ಅನುಭವಿ ರವಿಚಂದ್ರನ್ ಅಶ್ವಿನ್ ತಮ್ಮ 100 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದು, 4 ವಿಕೆಟ್‌ಗಳನ್ನು ಪಡೆಯುವ ಮೂಲಕ ಕೆಳ ಕ್ರಮಾಂಕವನ್ನು ಹೊರಹಾಕಿದರು.

ಹೀಗೆ ಇಂಗ್ಲೆಂಡ್ ಅನ್ನು 218 ರನ್‌ಗಳಿಗೆ ಆಲೌಟ್ ಮಾಡಿ ಭಾರತ ತಂಡದ ಆಟಗಾರರು ಪೆವಿಲಿಯನ್​ಗೆ ತೆರಳುವಾಗ ವಿಶೇಷ ಘಟನೆಯೊಂದು ನಡೆದಿದೆ. ಇಲ್ಲಿ ಕುಲ್ದೀಪ್ ಯಾದವ್ ಮತ್ತು ಆರ್. ಅಶ್ವಿನ್ ಮುದ್ದಾಗಿ ಜಗಳವಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಶ್ವಿನ್ ಹಾಗೂ ಕುಲ್ದೀಪ್ ಇಬ್ಬರ ನಡೆಗೂ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಯಾವುದೇ ಕ್ರಿಕೆಟ್ ಪಂದ್ಯದಲ್ಲಿ, ಒಬ್ಬ ಬೌಲರ್ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗಳನ್ನು ಪಡೆದಾಗ, ಅವನು ಆ ಚೆಂಡನ್ನು ತನ್ನೊಂದಿಗೆ ಸ್ಮಾರಕವಾಗಿ ಇಟ್ಟುಕೊಳ್ಳುತ್ತಾನೆ. ಅದರಂತೆ ಕುಲ್ದೀಪ್ 5 ವಿಕೆಟ್ ಪಡೆದರು, ಆದರೆ ಇದು ಅಶ್ವಿನ್ ವೃತ್ತಿಜೀವನದ 100 ನೇ ಟೆಸ್ಟ್ ಮತ್ತು ಅವರು 4 ವಿಕೆಟ್​ಗಳನ್ನು ಕಿತ್ತಿದ್ದಾರೆ ಎಂದು ಕುಲ್ದೀಪ್ ಈ ಚೆಂಡನ್ನು ಅಶ್ವಿನ್​ಗೆ ನೀಡಿದ್ದಾರೆ. ಆದರೆ ಹಿರಿಯ ಬೌಲರ್ ಅಶ್ವಿನ್ ಇದು 100 ನೇ ಪಂದ್ಯವಾಗಿದ್ದರೂ, ಇದು ಕುಲ್ದೀಪ್​ಗೆ ಸೇರಬೇಕಾದ ಚೆಂಡು ಎಂದು ಹೆಸರಿನಲ್ಲಿದೆ ಎಂದು ಅಶ್ವಿನ್ ಪುನಃ ಅವರಿಗೆ ನೀಡಿದ್ದಾರೆ.

ಇಲ್ಲಿಗೆ ನಿಲ್ಲದ ಕುಲ್ದೀಪ್ ಮತ್ತೆ ಚೆಂಡನ್ನು ಅಶ್ವಿನ್​ಗೆ ನೀಡಲು ಮುಂದಾದರು. ಆಗ ಮೊಹಮ್ಮದ್ ಸಿರಾಜ್ ಮಧ್ಯ ಪ್ರವೇಶಿಸಿ ಚೆಂಡನ್ನು ಅಶ್ವಿನ್​ಗೆ ಕೊಟ್ಟರು. ಆದರೆ, ಇದನ್ನು ತೆಗೆದುಕೊಳ್ಳಲು ನಿರಾಕರಿಸಿದ ಆ್ಯಶ್ 5 ವಿಕೆಟ್ ಪಡೆಯುವುದು ಸುಲಭದ ಕೆಲಸವಲ್ಲ ಎಂದು ಪುನಃ ಬೌಲ್ ಕುಲ್ದೀಪ್​ಗೆ ನೀಡಿದ್ದಾರೆ. ಬಳಿಕ ಕುಲ್ದೀಪ್ ಯಾದವ್ ಈ ಚೆಂಡಿನ ಮಾಲೀಕರಾದರು. ಇದರ ವಿಡಿಯೋ ಈಗ ಎಲ್ಲಡೆ ಹರಿದಾಡುತ್ತಿದೆ.