ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್​ ನಾಯಕರು ಕರಿಮಣಿ ಮಾಲೀಕ ನಾನಲ್ಲ ಅಂತಿದ್ದಾರೆ: ಅನಂತ್ ಕುಮಾರ್ ಹೆಗಡೆ ವ್ಯಂಗ್ಯ

ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಎಂದರೆ ಕರಿಮಣಿ ಮಾಲೀಕ ನಾನಲ್ಲಾ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಳಗಾವಿ, ಮಾ.8: ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಅವರು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಸಂಪಗಾಂವ ಗ್ರಾಮದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಉತ್ತರ ಕನ್ನಡದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲ. ಚುನಾವಣೆಗೆ ಸ್ಪರ್ಧಿಸಿದರೆ ಎಂದರೆ ಕರಿಮಣಿ ಮಾಲೀಕ ನಾನಲ್ಲಾ ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. ಕಾಂಗ್ರೆಸ್​ನಲ್ಲಿದ್ದ ಪದಾಧಿಕಾರಿಗಳು ಹೋಗಿ ನೀವು ನಿಲ್ಲಿರಿ ಅಂದರೆ ಕರಿಮನಿ ಮಾಲೀಕ ನಾನಲ್ಲಾ ಎಂದು ಹೇಳುತ್ತಾರೆ. ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಲು ಯಾರು ಒಲ್ಲೆ ಎನ್ನುತ್ತಿದ್ದಾರೆ. ಕರಿಮಣಿ ಮಾಲೀಕ ನಾನಲ್ಲ ಎಂದು ಹೇಳುತ್ತಿದ್ದಾರೆ. ಆದರೂ ಯಾರಿಗಾದರೂ ಒಬ್ಬರಿಗೆ ಕರಿಮಣಿ ಕಟ್ಟಿಸುತ್ತಾರೆ ಬಿಡಿ ಎಂದು ವ್ಯಂಗ್ಯವಾಡಿದರು.

ಮತ್ತೆ ಯಾರು ಸಿಗುವುದಿಲ್ಲಾ ಅಂತಾ ಖಾನಾಪುರದಲ್ಲಿ ರಿಜೆಕ್ಟೆಡ್ ಮಟೀರಿಯಲ್ ಇದೆ, ಅದನ್ನ ತಗೊಂಡ ಹೋಗಿ‌ ನಿಲ್ಲಿಸುತ್ತಾರೆ. ಖಾನಾಪುರದ ರಿಜೆಕ್ಟೆಡ್ ಮಟಿರಿಯಲ್ ನಮ್ಮ ಕ್ಷೇತ್ರದ ಅಭ್ಯರ್ಥಿ. ಖಾನಾಪುರದಿಂದ ಜನ ತಿರಸ್ಕಾರ ಮಾಡಿ ಓಡಿಸಿದ್ದಾರೆ, ಎಲ್ಲಾ ಅಡ್ಡಾಡಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಕರೆದುಕೊಂಡು ಓಡಾಡುತ್ತಿದ್ದಾರೆ. ಯಾರೇ ಆಗಲಿ ಕಾಂಗ್ರೆಸ್​ಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ಖಾನಾಪುರ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮೋದಿಯವರ ಪರವಾಗಿ ಜನ ವೋಟ್ ಹಾಕಲು ಸಿದ್ಧರಾಗಿದ್ದಾರೆ. ನಾವು ಹೋಗಿ ಒಂದು ಸಾರಿ ಪ್ರೀತಿಯಿಂದ ಕೇಳಿದರೆ‌ ಸಾಕು ಜನ ವೋಟ್ ಕೊಡುತ್ತಾರೆ ಎಂದು ಹೇಳಿದ ಹೆಗಡೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಕನಸಿನಲ್ಲೂ, ಮನಸ್ಸಿನಲ್ಲೂ ನಾನೇ ಇದ್ದೇನೆ
ಕಾಂಗ್ರೆಸ್​ನ ಮುಖವಾಡ ಅವರ ಆಡಳಿತ ನೋಡಿದರೆ ಗೊತ್ತಾಗುತ್ತದೆ. ಮೋದಿಯವರು ಎಲ್ಲವನ್ನೂ ಕೊಟ್ಟರೂ ದೇಶ ದೀವಾಳಿ ಆಗಲಿಲ್ಲ. ಸಿದ್ದರಾಮಯ್ಯ ಹೋದಲ್ಲೆಲ್ಲಾ ರಾಜಕಾರಣ ಮಾಡುತ್ತಿದ್ದಾರೆ. ಮೊನ್ನೆ ಬನವಾಸಿಗೆ ಹೋಗಿದ್ದಾಗ ಸಾಂಸ್ಕೃತಿಕ ವೇದಿಕೆ ಮೇಲೆ ಬರೀ ರಾಜಕಾರಣ ಮಾತಾಡಿದರು. ಸಿದ್ದರಾಮಯ್ಯನವರು ನನ್ನ ಬಹಳ ಹಚ್ಚಿಕೊಂಡಿದ್ದಾರೆ ಕನಸಲ್ಲೆಲ್ಲಾ ನಾನು ಬರುತ್ತಿದ್ದೇನೆ. ಎಲ್ಲಿ ಹೋದ್ರೂ ನನ್ನ ಸುದ್ದಿ ಹೇಳುತ್ತಾ ಇರುತ್ತಾರೆ. ಕನಸಿನಲ್ಲೂ, ಮನಸ್ಸಿನಲ್ಲೂ, ಒಳಗೆ, ಹೊರಗೆ ಹೋದರೂ ಅನಂತಕುಮಾರ್ ಹೆಗಡೆ. ನನ್ನನ್ನು ಸರ್ವಾಂತರಯಾಮಿ ಮಾಡಿದ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದರು.

ನಾವು ಮಾಡಿಕೊಳ್ಳುವ ಪ್ರಚಾರಕ್ಕಿಂತ ಸಿದ್ದರಾಮಯ್ಯನವರು ನಮಗೆ ಹೆಚ್ಚು ಪ್ರಚಾರ ಕೊಡುತ್ತಿದ್ದಾರೆ. ಸಿದ್ದರಾಮಯ್ಯನವರೇ ನಮ್ಮ ಹೆಸರಿನಲ್ಲಿ ನಗಾರಿ ಹೊಡೆಯಿರಿ. ಅವರ ದುರಂಹಕಾರಿ ಮಾತುಗಳನ್ನ ನೀವು ಕೇಳಿದ್ದೀರಿ. ಯಾವ ಮುಖ್ಯಮಂತ್ರಿ, ರಾಜಕಾರಣಿಗೆ ದುರಹಂಕಾರ ಇತ್ತು? ಸಿದ್ದರಾಮಯ್ಯ ಅವರ ಪ್ರಶ್ನೆಗಳಿಗೆ ನಾವೇ ಉತ್ತರ ಕೊಡಬೇಕು. ಸಿದ್ದರಾಮಯ್ಯನವರಿಗೆ ನಾವು ಉತ್ತರ ಕೊಟ್ಟರೇ ಚರ್ಮಕ್ಕೆ ತಾಗುತ್ತದೆ. ಕಾಂಗ್ರೆಸ್​ನ ಮುಖವಾಡದ ಬದುಕು ನಮಗೆ ಗೊತ್ತಾಗಿದೆ. ಎಲ್ಲಾ ಕಡೆ ಮೋದಿ ಅವರು ಗೆಲ್ಲಬೇಕು ವಾತಾವರಣ ಇದೆ. ಮೋದಿ ಗೆಲ್ಲಬೇಕು ಅಂತಾ ಎಲ್ಲಾ ಕಾಂಗ್ರೆಸ್​ನವರೇ ಹೇಳುತ್ತಿದ್ದಾರೆ ಎಂದರು.

ಜನರನ್ನು ಹುಚ್ಚರನ್ನಾಗಿ ಮಾಡುತ್ತಿರುವ ಕಾಂಗ್ರೆಸ್
ದೇಶದ ಜನರನ್ನು ಕಾಂಗ್ರೆಸ್ ಪಕ್ಷ ಹುಚ್ಚರನ್ನಾಗಿ ಮಾಡುತ್ತಿದೆ. ಈ ದೇಶದ ಧರ್ಮ, ಜಾತಿ ಯಾರಿಗೂ ಗೊತ್ತಾಗಬಾರದು ಅಂತಾ ಕಾಂಗ್ರೆಸ್ ದೂರ ಹೋಗುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದು ಕಾಂಗ್ರೆಸ್. ಸಂವಿಧಾನದಲ್ಲಿ ಜಾತ್ಯತೀತ ಅನ್ನೋ ಅಕ್ಷರವನ್ನ ತುರುಕಿದ್ದು ಕಾಂಗ್ರೆಸ್. ಸಂವಿಧಾನದಲ್ಲಿ 28ನೇ ಪರಿಚ್ಛೇದ ಬದಲಾವಣೆ ಮಾಡಿದರು. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ಕೊಡುವ ಹಕ್ಕನ್ನ ಕಿತ್ತುಕೊಂಡರು. ನಂತರ ಬಸವಣ್ಣ, ಅಕ್ಕಮಹಾದೇವಿ, ಮಹಾಭಾರತ ಎಲ್ಲ ಉಲ್ಲೇಖ ಪಠ್ಯಪುಸ್ತಕದಿಂದ ತೆಗೆದು ಹಾಕಿದರು ಎಂದರು.

ಆರ್ಟಿಕಲ್ 30ರಲ್ಲಿ ಮದರಸಾ, ಚರ್ಚ್​ಗಳಲ್ಲಿ ಧಾರ್ಮಿಕ ಶಿಕ್ಷಣ ಕೊಡುವ ಅಧಿಕಾರ ಕೊಟ್ಟರು. ಇದರಿಂದ ನಮ್ಮ ಮಕ್ಕಳು ಚುಲೋ ಹುಡುಗಿ ಸಿಕ್ಕರೆ ಓಡಿ ಹೋಗುತ್ತಾರೆ. ಅಪ್ಪ ಮಕ್ಕಳನ್ನ ಆಶ್ರಮಕ್ಕೆ ಬಿಟ್ಟು ಹೋಗುತ್ತಾರೆ. ನಮ್ಮ ಮಕ್ಕಳು ಪ್ರಾಣಿಗಳಂತೆ ಬದುಕುತ್ತವೆ‌. ಸಂವಿಧಾನಾತ್ಮಕವಾಗಿ ಧರ್ಮವನ್ನ ಒಡೆದು ಹಾಳು ಮಾಡಿದರು. ಇದು ಬದಲಾಗಬೇಕು ಅಂದರೆ ಬಿಜೆಪಿ, ಮೋದಿ ಬರಬೇಕು ಎಂದರು.

ಪೂಜಾ ಕಾಯ್ದೆಯನ್ನ ತೆಗೆದು ಬಿಸಾಕುತ್ತೇವೆ
ಒಂದು ರಾಮ ಮಂದಿರ ಕಟ್ಟಲು 500 ವರ್ಷ ಆಯ್ತು. ಈ ರೀತಿ ಮೂರು ಲಕ್ಷಕ್ಕೂ ಹೆಚ್ಚು ಮುಸ್ಲಿಮರು ಕೊಳ್ಳೆ ಹೊಡೆದ ದೇವಸ್ಥಾನ ಇವೆ. ಒಡೆದು ಹೋದ ದೇವಸ್ಥಾನ ಮತ್ತೆ ಕಟ್ಟುವುದು ನಮ್ಮ ಹಕ್ಕು. ರಾಮ ಮಂದಿರಕ್ಕೆ ಹೊಸ ಕಾನೂನು ತಂದರು. ಆದರೆ ಎಲ್ಲದಕ್ಕೂ ಕಾನೂನು ತರಲು ಆಗುತ್ತಾ? ನಮ್ಮ ದೇವಸ್ಥಾನ ಅಂತಾ ಕೇಳುವ ಹಕ್ಕನ್ನ ನಿಮ್ಮಿಂದ ಕಿತ್ತುಕೊಂಡರು. ಮುಂದಿನ ದಿನಗಳಲ್ಲಿ ಪೂಜಾ ಕಾಯ್ದೆಯನ್ನ ತೆಗೆದು ಬಿಸಾಕುತ್ತೇವೆ. ನಮ್ಮ ದೇವಸ್ಥಾನ ನಮ್ಮ ಹಕ್ಕು ತರುತ್ತೇವೆ ಎಂದರು.

ನೀತಿ ನಿಯತ್ತು ಇಲ್ಲದ ಸಿದ್ದರಾಮುಲ್ಲಾಖಾನ್ ಸರ್ಕಾರ
ಅಂಗನವಾಡಿ ಮಕ್ಕಳಿಗೆ ಕೊಡುವ ಫುಡ್​ನಲ್ಲಿ ಕಡಿತ ಮಾಡಲಾಗುತ್ತಿದೆ. ಶಾಸಕರಿಗೆ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಒಂದೇ ವರ್ಷದಲ್ಲಿ ಹಣ ಕೊಡದಷ್ಟು ದುರ್ಗತಿ ಬಂದಿದೆ. ಕೇಂದ್ರದಲ್ಲಿ ಮೋದಿ ಸರ್ಕಾರ ನೀತಿ ನಿಯತ್ತಿನಿಂದ ಕೆಲಸ ಮಾಡುತ್ತಿದೆ. ನೀತಿ ನಿಯತ್ತು ಎರಡು ಇಲ್ಲಾ ಅಂದರೆ ಸಿದ್ದರಾಮುಲ್ಲಾಖಾನ್ ಸರ್ಕಾರ ಆಗುತ್ತದೆ.