ಡಾ. ಹಿರೇಮಠ ಫೌಂಡೇಶನ್​ನಿಂದ ಅರುಣ್​ ಯೋಗಿರಾಜ್​ಗೆ “ಅಭಿನವ ಅಮರ ಶಿಲ್ಪಿ” ಬಿರುದು

ಬೆಂಗಳೂರು,: ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾನೆಗೊಂಡಿರುವ ಬಾಲರಾಮನ (ರಾಮ ಲಲ್ಲಾ) ಮೂರ್ತಿಯನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಅವರಿಗೆ ಡಾ. ಹಿರೇಮಠ ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆ ಸಹಯೋಗದಲ್ಲಿ “ಅಭಿನವ ಅಮರ ಶಿಲ್ಪಿ” ಬಿರುದು ಘೋಷಣೆಯಾಗಿದೆ. ಮಾರ್ಚ್‌ 4ರಂದು ಕಾರವಾರ ನಗರದ ಸಾಗರ್‌ ಕನ್ವೆನ್ಷನ್‌ ಹಾಲ್‌ನಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಬಿರುದು ನೀಡಿ ಗೌರವಿಸಲಾಗುವುದು ಎಂದು ಡಾ. ಹಿರೇಮಠ ಫೌಂಡೇಶನ್​ನ ಸಂಸ್ಥಾಪಕ ಡಾ. ವಿಶ್ವನಾಥ ಹಿರೇಮಠ ಅವರು ತಿಳಿಸಿದರು.

ಇಂದು (ಫೆ.22) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ರಾಮ ಮಂದಿರ ಭಾರತೀಯರ 500 ವರ್ಷಗಳ ಕನಸು. ಲಕ್ಷಾಂತರ ಕರಸೇವಕರ ಪರಿಶ್ರಮದ ಸಲುವಾಗಿ ಇಂದು ರಾಮ ಮಂದಿರ ಅಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿದೆ. ರಾಮ ಮಂದಿರದಲ್ಲಿರುವ ಸುಂದರ ರಾಮ ಲಲ್ಲಾ ಮೂರ್ತಿಯ ಕೆತ್ತನೆ ಮಾಡಿರುವುದು ನಮ್ಮ ಕರ್ನಾಟಕದ ಮೈಸೂರಿನವರೇ ಆದ ಅರುಣ್‌ ಯೋಗಿರಾಜ್‌ ಅವರೆಂಬುದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ. ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಸ್ವಾಗತಿಸಿ ಸನ್ಮಾನಿಸಬೇಕೆಂಬುದು ನಮ್ಮ ಬಯಕೆಯಾಗಿದೆ,” ಎಂದು ಹೇಳಿದರು.

“ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರು, ಪ್ರಖರ ವಾಗ್ಮಿ, ಹಿಂದೂ ಹುಲಿ ಎಂದು ಖ್ಯಾತಿ ಪಡೆದಿರುವ ಶ್ರೀ ಪ್ರಮೋದ್‌ ಮುತಾಲಿಕ್ ಅವರು ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಸನಾತನ ಧರ್ಮ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಡಾ. ಗಜೇಂದ್ರ ನಾಯಕ್‌ ಅವರಲ್ಲದೆ ಹಲವು ಹಿಂದೂ ಮುಖಂಡರು ಈ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ,” ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ 200ಕ್ಕೂ ಹೆಚ್ಚಿನ ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರಿಗೆ, ಅವರ ನಿಸ್ವಾರ್ಥ ಸೇವೆಗಾಗಿ ಅಭಿನಂದನಾ ಸಮಾರಂಭವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ಡಾ. ಹಿರೇಮಠ ಫೌಂಡೇಷನ್​​ನ ಕಾರ್ಯದರ್ಶಿ ಲಕ್ಷ್ಮೀಶ ಅವರು ಮಾತನಾಡಿ “ಡಾ. ಹಿರೇಮಠ ಫೌಂಡೇಶನ್ ಡಾ. ವಿಶ್ವನಾಥ ಹಿರೇಮಠ ಅವರ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಸಾಮಾಜಿಕ ಕೆಲಸಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿಕೊಂಡು ಬರುತ್ತಿದೆ. ಯುವಕರ ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಆರೋಗ್ಯ ಮತ್ತು ಸ್ವಚ್ಛ ಉತ್ತರಕನ್ನಡ ಎಂಬ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಇದೀಗ ಅಭಿನಂದನಾ ಸಮಾರಂಭದದ ಮೂಲಕ ಧಾರ್ಮಿಕತೆಯ ಸಾರವನ್ನು ಎತ್ತಿ ಹಿಡಿಯಲು ಹೊರಟಿದ್ದೇವೆ ಎಂದು  ಹೇಳಿದರು.