ವಸತಿ ಶಾಲೆಗಳಲ್ಲಿ ಘೋಷವಾಕ್ಯ ಬದಲಾವಣೆ: ಕಾರಣ ಗೊತ್ತಿಲ್ಲವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆಯ ಘೋಷವಾಕ್ಯ ಬದಲಾವಣೆ ಮಾಡಿರುವ ವಿಚಾರ ರಾಜ್ಯದಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವರು, ಘೋಷವಾಕ್ಯ ಬದಲಾವಣೆಗೆ ಕಾರಣ ಗೊತ್ತಿಲ್ಲ ಎಂದಿದ್ದಾರೆ. ಆದಾಗ್ಯೂ, ಬದಲಾವಣೆಯನ್ನು ಅವರು ಸಮರ್ಥಿಸಿದ್ದಾರೆ.

ಬೆಂಗಳೂರು, ಫೆಬ್ರವರಿ 19: ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು (Kuvempu) ಅವರ ಕವಿತೆಯ ಘೋಷವಾಕ್ಯ ಬದಲಾವಣೆಗೆ ಕಾರಣ ಏನೆಂಬುದು ಗೊತ್ತಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪ್ರತಿಕ್ರಿಯಿಸಿದರು. ವಿಜಯಪುರ (Vijayapura) ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಘೋಷವಾಕ್ಯ ಬದಲಾವಣೆ ಮಾಡಿದ ವಿಚಾರ ರಾಜಕೀಯ ಆಯಾಮ ಪಡೆಯುತ್ತಿದ್ದಂತೆಯೇ ಆ ಬಗ್ಗೆ ವಿಧಾನಸೌಧದಲ್ಲಿ ಅವರು ಪ್ರತಿಕ್ರಿಯೆ ನೀಡಿದರು. ಯಾವ ನಿಟ್ಟಿನಲ್ಲಿ ಈ ರೀತಿಯಾಗಿ ಘೋಷ ವಾಕ್ಯ ಬದಲಾವಣೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಅದು ಕುವೆಂಪು ಅವರ ಕವಿತೆಯ ಸಾಲುಗಳು. ನಾವು ಕುವೆಂಪು ಆಶಯದ ರೀತಿಯಲ್ಲೇ ನಡೆದುಕೊಂಡು ಹೋಗುತ್ತೇವೆ ಎಂದು ಅವರು ಹೇಳಿದರು.

ವಿದ್ಯೆ ಅಂದರೆ ಸರಸ್ವತಿ. ಕೈ ಮುಗಿಯುವುದು ನಮ್ಮ ಸಂಪ್ರದಾಯ. ಅದು ಭಿಕ್ಷೆ ಬೇಡುವುದು ಅಲ್ಲ ಅಂತ ನನ್ನ ಅಭಿಪ್ರಾಯ. ಏನಾದರೂ ಉದಾಹರಣೆಗಾಗಿ ಆ ರೀತಿ ಮಾಡಿರಬಹುದು. ಮಕ್ಕಳ ಹಕ್ಕು ಚ್ಯುತಿಯಾಗಿ ಈ ರೀತಿ ಮಾಡಿದ್ದಾರೋ ಗೊತ್ತಿಲ್ಲ. ಕೈ ಮುಗಿದು ಒಳಗೆ ಬಂದು ನಿಮ್ಮ ಹಕ್ಕುನ್ನು ಪ್ರತಿಪಾದಿಸಿ ಅಂತ ಇದ್ದರೆ ಚನ್ನಾಗಿ ಇರುತ್ತಿತ್ತು. ಬಿಜೆಪಿಯವರು ವಿರೋಧ ಮಾಡಲಿ. ಯಾವುದೇ ಕಾರಣಕ್ಕೂ ಕುವೆಂಪು ಅವರಿಗೆ ನಮ್ಮ ಸರ್ಕಾರ ಅವಮಾನ ಮಾಡಲ್ಲ ಎಂದು ಸಚಿವರು ಹೇಳಿದರು.

ಕುವೆಂಪು ಅವರ ಕವಿತೆಯ ಸಾಲುಗಳನ್ನು ತೆಗೆಯದೇ ಇನ್ನಷ್ಟು ಚೆನ್ನಾಗಿ ಘೋಷವಾಕ್ಯ ಮಾಡಬಹುದಿತ್ತು. ಸರಸ್ವತಿ ಹಾಗೂ ಜ್ಞಾನಕ್ಕೆ ಜಾತಿ, ಧರ್ಮ ಇರಲ್ಲ. ಬಿಜೆಪಿ ಅವರು ಹೇಳಿದ್ದಾರೆ ಅಂತ ಬದಲಾವಣೆ ಮಾಡಬೇಕು ಅಂತೇನಿಲ್ಲ. ವೈಯಕ್ತಿಕವಾಗಿ ಇದನ್ನು ಇಟ್ಕೊಂಡು ಹಕ್ಕನ್ನು ಪ್ರತಿಪಾದಿಸು ಅಂತ ಇದ್ದರೆ ಒಳ್ಳೆಯದು. ಅದರಿಂದ ಅಂಬೇಡ್ಕರ್ ಅವರಿಗೂ ಗೌರವ ಕೊಟ್ಟಂತೆ ಆಗುತ್ತದೆ. ಕೈ ಮುಗಿದು ಒಳಗೆ ಬಾ ಅನ್ನೋದು ನಮ್ಮ ಸಂಪ್ರದಾಯ. ಹೊರದೇಶಗಳಲ್ಲೂ ಈ ಸಂಪ್ರದಾಯ ಪಾಲಿಸುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಘೋಷವಾಕ್ಯ ಬದಲಾವಣೆ ಸಮರ್ಥಿಸಿದ ಲಕ್ಷ್ಮೀ ಹೆಬ್ಬಾಳ್ಕರ್
ಕೈ ಮುಗಿದು ಬಾ, ಧೈರ್ಯದಿಂದ ಪ್ರಶ್ನಿಸಿ ಎಂಬುದು ಎರಡೂ ಒಂದೇ ಎಂದಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವೆರಡೂ ವಾಕ್ಯಗಳು ಒಂದೇ ಅರ್ಥದಲ್ಲಿವೆ. ಅವು ತದ್ವಿರುದ್ಧ ಅಲ್ಲ. ಜ್ಞಾನ ದೇಗುಲಕ್ಕೆ ಜ್ಞಾನ ಪಡೆಯಲು, ಆತ್ಮವೃದ್ಧಿಗೆ ಬನ್ನಿ. ಧೈರ್ಯದಿಂದ ಜೀವನ ಸಾಗಿಸಲು ಬನ್ನಿ ಎಂದು ಹೆಬ್ಬಾಳ್ಕರ್ ಹೇಳಿದರು. ಈ ವಿಚಾರವಾಗಿ ಹೆಚ್ಚು ಪ್ರತಿಕ್ರಿಯೆ ನೀಡಲ್ಲ. ಹೆಚ್ಚು ಮಾತನಾಡಿದರೆ ಪರ, ವಿರೋಧ ಚರ್ಚೆಯಾಗುತ್ತದೆ ಎಂದು ಅವರು ಹೇಳಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ ಮಾಡಿದ ವಿಚಾರ ಇಂದು (ಸೋಮವಾರ) ಬೆಳಿಗ್ಗೆಯಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ. ವಿಧಾನಸಭೆ ಕಲಾಪದಲ್ಲೂ ಈ ವಿಚಾರ ಪ್ರತಿಧ್ವನಿಸಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಮೊದಲಿದ್ದ ಬರಹವನ್ನೇ ಬರೆಸಲು ಸೂಚಿಸಿತ್ತು. ಪರಿಣಾಮವಾಗಿ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯ ದ್ವಾರದಲ್ಲಿ ಬರಹವನ್ನು ಮತ್ತೆ ಮೊದಲಿನಂತೆ ಮಾಡಲಾಗಿದೆ.