ದಾಂಡೇಲಿಯಲ್ಲಿ ಸಂವಿಧಾನ ಜಾಗೃತಿ ಜಾಥಾ‌ಕ್ಕೆ ಚಾಲನೆ

ದಾಂಡೇಲಿ : ನಗರ ಪೊಲೀಸ್ ಠಾಣೆಯ ಹತ್ತಿರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉತ್ತರಕನ್ನಡ, ತಾಲೂಕಾಡಳಿತ ದಾಂಡೇಲಿ, ನಗರ ಸಭೆ ಮತ್ತು ತಾಲೂಕು ಪಂಚಾಯ್ತು ದಾಂಡೇಲಿ ಇವುಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ‌ ಕಾರ್ಯಕ್ರಮಕ್ಕೆ ಬುಧವಾರ ಚಾಲನೆಯನ್ನು ನೀಡಲಾಯಿತು.

ಕಾರ್ಯಕ್ರಮಕ್ಕೆ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರು ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಳಿಯಾಳದ ವಸತಿ ಶಾಲೆಯ ಶಿಕ್ಷಕರಾದ ಮೌನೇಶ್ ಬಾರೀಕರ್ ಅವರು ಭಾರತದ ಸಂವಿಧಾನ ಅಂಗೀಕರಿಸಿಕೊಂಡು 75 ವರ್ಷಗಳಾದ ಹಿನ್ನಲೆಯಲ್ಲಿ ಸರ್ಕಾರದ ವತಿಯಿಂದ “ಸಂವಿಧಾನ ಜಾಗೃತಿ ಜಾಥಾ”ಕಾರ್ಯಕ್ರಮವನ್ನು ರಾಜ್ಯವ್ಯಾಪಿ ಆಯೋಜಿಸಲಾಗಿದೆ. ಸಂವಿಧಾನವು ಜನತೆಯ ಹಕ್ಕುಗಳ ಮೂಲವಾಗಿದೆ. ವಿಶ್ವದ ಧೀರ್ಘ ಸಂವಿಧಾನವು ನಮ್ಮದು ಹಾಗೂ ನಮ್ಮ ಸಂವಿಧಾನದ ಸೌಂದರ್ಯವೇ ಸಮಾನತೆ ಎಂದು ತಿಳಿಸಿದರು. ಸಂವಿಧಾನ ಜಾಗೃತಿ ಜಾಥಾ ಮತ್ತು ಸ್ತಬ್ಧಚಿತ್ರಗಳು ಭಾರತದ ಸಂವಿಧಾನ ಪೀಠಿಕೆ ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ, ಸಂಸ್ಕಂತಿ ಬಿಂಬಿಸುವುದರ ಜೊತೆಗೆ ಸಾಹಿತ್ಯ ದಿಗ್ಗಜರ ಪರಿಚಯವನ್ನು ಈ ಜಾಥಾ ಮಾಡಿಕೊಡಲಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ್, ನಗರ ಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಿಕಟಪೂರ್ವ ಉಪಾಧ್ಯಕ್ಷ ಸಂಜಯ್‌ ನಂದ್ಯಾಳ್ಕರ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ತಾ.ಪಂ‌ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಹಾಲಮನ್ನವರ, ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಸುರೇಶ್ ನಾಯಕ, ಹೆಸ್ಕಾಂ ಸಹಾಯಕ‌ ಕಾರ್ಯನಿರ್ವಾಹಕ ಅಭಿಯಂತರರಾದ ದೀಪಕ್ ನಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಲಕ್ಷ್ಮೀದೇವಿ, ಪಿಎಸ್ಐ ಯಲ್ಲಪ್ಪ.ಎಸ್, ಹೆಸ್ಕಾಂ ಶಾಖಾಧಿಕಾರಿ ಪರಶುರಾಮ ಉಪ್ಪಾರ, ಸಿ.ಆರ್.ಪಿ.ಲಲಿತಾ ನಾಯ್ಕ, ನಗರ ಸಭೆಯ ಸದಸ್ಯರು, ವಿವಿಧ ದಲಿತಪರ ಸಂಘಟನೆಗಳ ಹಾಗೂ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ತಹಶೀಲ್ದಾರ್‌ ಕಚೇರಿ, ನಗರ ಸಭೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಅಶೋಕ್ ಪವಾರ್ ಅವರು ಸ್ವಾಗತಿಸಿದರು. ವಸತಿ ಶಾಲೆಯ ವಾರ್ಡನ್ ದರ್ಶನ್ ನಾಯ್ಕ ವಂದಿಸಿದರು.