ಎಂಇಎಸ್ ಮುಖಂಡನ ಕಾರ್ಮಿಕ ಸಭೆಗೆ ಅನುಮತಿ ನೀಡದಂತೆ ಕರವೇ ಆಗ್ರಹ‌ : ಮುಖಕ್ಕೆ ಮಸಿ ಬಳಿಯುವ ಎಚ್ಚರಿಕೆ

ದಾಂಡೇಲಿ : ನಗರದ ಅಂಬೇಡ್ಕರ್ ಸಭಾಭವನದಲ್ಲಿ ಜ. 25 ಗುರುವಾರದಂದು ಮಹಾರಾಷ್ಟ್ರ ಏಕಿಕರಣ ಸಮಿತಿಯ ಮುಖಂಡ ಮಾಧವರಾವ್ ಚವ್ಹಾಣ್ ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಮಿಕರ ಬಹಿರಂಗ ಸಭೆಗೆ ಅನುಮತಿ ನೀಡಬಾರದೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರ ಬಣ) ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಮತ್ತು ನಗರಸಭೆ ಪೌರಾಯುಕ್ತರಿಗೆ ಈಗಾಗಲೆ ಲಿಖಿತ ಮನವಿಯನ್ನು ನೀಡಲಾಗಿದೆ ಎಂದು ಕರವೇ ಪ್ರ ಬಣದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ ಕೊಠಾರಿ ಅವರು ಮಂಗಳವಾರ ನಗರದಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿ, ಭಾಷೆಗೆ ನಿರಂತರ ದ್ರೋಹ ಎಸಗುತ್ತ ಬಂದಿರುವ ಎಂಇಎಸ್ ಮುಖಂಡ ಮಾಧವರಾವ್ ಚವ್ಹಾಣ್ ವೃತ್ತಿಯಲ್ಲಿ ವಕೀಲರಾಗಿದ್ದಾರೆ. ಇವರಿಗೆ ಸಭೆ ನಡೆಸಲು ಅವಕಾಶ ನೀಡಿದರೆ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಸಭೆಯಲ್ಲಿ ಕನ್ನಡ ನಾಡಿನ ಕುರಿತು ಮತ್ತೆ ಕ್ಯಾತೆ ತೆಗೆಯವ ಸಂದೇಹವಿದೆ. ಇಲ್ಲಿ ಕನ್ನಡಿಗರು ಮತ್ತು ಮರಾಠಿಗರು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಈ ಬಾಂಧವ್ಯಕ್ಕೆ ತೊಡಕಾಗಬಾರದು. ಹೀಗಿರುವಾಗ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಅಶಾಂತಿಗೆ ಕಾರಣವಾಗುವ ಸಂಘಟನೆ ಮುಖಂಡರನ್ನು ಕೆಲವರು ದಾಂಡೇಲಿ ನಗರದಲ್ಲಿ ಕಾರ್ಮಿಕರ ಸಭೆ ನಡೆಸಲು ಆಹ್ವಾನಿಸಿರುವುದು ದುರ್ದೈವ್ಯದ ಸಂಗತಿ. ಒಂದು ವೇಳೆ ಅನುಮತಿ ನೀಡಿದ್ದೆ ಆದರೆ ಎಂಇಎಸ್ ಮುಖಂಡನ ಮುಖಕ್ಕೆ ಕರವೇ ಮುಖಂಡರು ಮಸಿ ಬಳಿಯುವುದಕ್ಕು ಹಿಂಜರಿಯುವದಿಲ್ಲ. ಈ ಕಾರಣದಿಂದ ಸಬಂಧಪಟ್ಟ ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಂಡು ಡಿ. 25 ರಂದು ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಕಾರ್ಮಿಕರ ಬಹಿರಂಗ ಸಭೆಗೆ ಅನುಮತಿ ನೀಡಬಾರದೆಂದು ಪ್ರವೀಣ್ ಕೊಠಾರಿ ಹಾಗೂ ಮಾಜಿ ನಗರ ಸಭಾ ಸದಸ್ಯರಾದ ರಾಮಲಿಂಗ ಜಾಧವ್ ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಸಂದೀಪ್ ದೇಶಭಂಡಾರಿ, ರಫೀಕ್ ನದಾಫ್ ಉಪಸ್ಥಿತರಿದ್ದರು