ಶ್ರದ್ಧೆಯಿಂದ ಮಾಡುವ ಧರ್ಮ‌ಕಾರ್ಯದಿಂದ ಆತ್ಮತೃಪ್ತಿ ಸಿಗಲು ಸಾಧ್ಯ : ಪರ್ತಗಾಳಿ ಶ್ರೀಗಳು

ದಾಂಡೇಲಿ : ಶ್ರದ್ಧಾ ಮನಸ್ಸಿನಿಂದ ಮಾಡುವ ಪೂಜೆ ಹಾಗೂ ಧರ್ಮಕಾರ್ಯಗಳಿಂದ ಆತ್ಮ ತೃಪ್ತಿಸಿಗಲು ಸಾಧ್ಯ.‌ ಅಂತರಂಗ ಶುದ್ಧಿಯಿಂದ ದೇವರ ಅನುಗ್ರಹವಾಗುತ್ತದೆ ಎಂದು ಪರ್ತಗಾಳಿ‌ ಮಠದ ಶ್ರೀ.ವಿದ್ಯಾಧೀಶತೀರ್ಥ ಶ್ರೀಪಾದ ಸ್ವಾಮೀಜಿಯವರು ನುಡಿದರು.

ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ.ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಐದು ದಿನಗಳ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನವಾದ ಸೋಮವಾರ ವಿದ್ಯಾಧಿರಾಜ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರವಚನವನ್ನು ನೀಡಿ ಮಾತನಾಡುತ್ತಿದ್ದರು.‌ಅಂತರಂಗದ ಶುದ್ಧಿ ಬಹಿರಂಗ ಶುದ್ಧಿಗಿಂತಲೂ ಮಹತ್ವವಾದದ್ದು. ಸ್ನಾನದಿಂದ ಬಹಿರಂಗ ಶುದ್ಧಿ ಮಾತ್ರ ಆಗುತ್ತದೆ. ಆದರೆ ಅಂತರಂಗ ಶುದ್ಧಿಗಾಗಿ ಆಧ್ಯಾತ್ಮದ ಮೊರೆ ಹೋಗಬೇಕಾಗುತ್ತದೆ‌ ಎಂದ ಅವರು ಇಲ್ಲಿಯ ಸಮಾಜ ಬಾಂಧವರು ಭಕ್ತಿ ಮನಸ್ಸಿನಿಂದ ಗುರು ಸೇವೆಯನ್ನು ಮಾಡಿದ್ದಾರೆ. ಶ್ರದ್ಧೆಯಿಂದ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಎಲ್ಲರೂ ಸೇರಿ ಪರಸ್ಪರ ಸೌಹಾರ್ದತೆ ಹಾಗೂ ಕಾಳಜಿಯಿಂದ ಇಂತಹ ಧರ್ಮ ಕಾರ್ಯಗಳನ್ನು ಮಾಡಬೇಕು. ಹಾಗಾದಾಗ ಪುಣ್ಯ ಪ್ರಾಪ್ತಿಯಾಗಲು ಸಾಧ್ಯ ಎಂದು ಈ ಕಾರ್ಯಕ್ರಮದಲ್ಲಿ ಕಾಯಾ ವಾಚಾ ಮನಸಾ ತಮ್ಮನ್ನು ಸಮರ್ಪಿಸಿಕೊಂಡ ಸರ್ವರಿಗೂ ಭಗವಂತ ಸದಾ ಅನುಗ್ರಹಿಸಲಿ ಎಂದು ಶುಭ ಪ್ರಾರ್ಥಿಸಿದರು.

ವೇದಿಕೆಯಲ್ಲಿ ಗೌಡ ಸಾರಸ್ವತ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಶ್ರೀ.ಲಕ್ಷ್ಮೀ‌ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪ್ರಭು ಉಪಸ್ಥಿತರಿದ್ದರು.

ಜನಾರ್ಧನ ಪ್ರಭು ಸ್ವಾಗತಿಸಿದ ಕಾರ್ಯಕ್ರಮಕ್ಕೆ ಗೌಡ ಸಾರಸ್ವತ ಸಮಾಜದ ಕಾರ್ಯದರ್ಶಿ ಸುರೇಶ್ ಕಾಮತ್ ವಂದಿಸಿದರು. ಶ್ರೀನಿವಾಸ ಪ್ರಭು ಕಾರ್ಯಕ್ರಮವನ್ನು‌ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುನೀಲ್ ಹೆಗಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ವೇದಿಕೆಯ ಮುಂಭಾಗದಲ್ಲಿ ಕಲಾವಿದ ರವಿ ಶಾನಭಾಗ್ ಅವರು ಬಿಡಿಸಿದ ಅಯೋಧ್ಯೆ ಶ್ರೀರಾಮ ಮಂದಿರದ ರಂಗೋಲಿ ಎಲ್ಲರ ಸೆಳೆಯಿತು. ಪ್ರತಿ ದಿನವೂ ಎಲ್ಲ ಸಮಾಜ ಬಾಂಧವರು ಶ್ರೀ ಸ್ವಾಮಿಗಳ ಪಾದಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಐದು ದಿನಗಳವರೆಗೆ ನಡೆದ ಈ ಕಾರ್ಯಕ್ರಮ ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯಿತು.