ದಾಂಡೇಲಿಯಲ್ಲಿ ಗಮನ ಸೆಳೆದ ರವಿ ಶಾನಭಾಗ್ ಕುಂಚದಲ್ಲಿ ಮೂಡಿಬಂದ ಅಯೋಧ್ಯೆ ಶ್ರೀರಾಮ ಮಂದಿರದ ರಂಗೋಲಿ

ದಾಂಡೇಲಿ : ಅವರು ಸುಸಂಸ್ಕೃತ ಮನಸ್ಸಿನ ಸಂಸ್ಕಾರವಂತ ಯುವಕ. ಗುಣದಲ್ಲಿಯೂ ಹಾಗೆ ನಡೆಯಲ್ಲಿಯೂ ಹಾಗೆ ಎನ್ನುವಂತೆ ತಂದೆ ತಾಯಿಗೆ ತಕ್ಕ ಮಗನಾಗಿ, ಊರಿಗೆ ಹೆಮ್ಮೆಯ ಕೀರ್ತಿಯಾಗಿ ಬೆಳೆದ ಮತ್ತು ಬೆಳೆಯುತ್ತಿರುವ ಕಲಾ ಪ್ರತಿಭೆ ರವಿ ಶಾನಭಾಗ್.

ನಗರದ ರೋಟರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿರುವ ರವಿ ಶಾನಭಾಗ್ ಅವರು ತನ್ನ ವಿಶಿಷ್ಟ ಚಿತ್ರಕಲಾ ಕೃತಿಗಳಿಂದ ಜಿಲ್ಲೆಯ ಜನತೆಯ ಗಮನ ಸೆಳೆದವರು. ದಾಂಡೇಲಿಯಲ್ಲಿ ಯಾವುದೇ ಸ್ತಬ್ಧಚಿತ್ರಗಳು ಇರಲಿ ಅಲ್ಲಿ ರವಿ ಶಾನಭಾಗ್ ಅವರ ಕೈಯಲ್ಲಿ ಅರಳಿದ ಕಲಾಕೃತಿಗಳು ಬೇಕೆ‌ ಬೇಕು. ಆವಾಗ್ಲೇ ಆ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಹೊಸ ಝಲಕ್ ಬರುತ್ತದೆ.

ದಾಂಡೇಲಿಯ ಶ್ರೀ ವಿದ್ಯಾಧಿರಾಜ ಸಭಾಭವನದಲ್ಲಿ ಪರ್ತಗಾಳಿ ಮಠದ ಪರಮಪೂಜ್ಯ ಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.‌ ಪ್ರತಿದಿನವೂ ವಿದ್ಯಾಧಿರಾಜ ಸಭಾಭವನದಲ್ಲಿ ರವಿ ಶಾನಭಾಗ್ ಅವರು ವಿವಿಧ ರೀತಿಯ ರಂಗೋಲಿಗಳನ್ನು ಹಾಕಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ತಂದಿದ್ದಾರೆ.

ಅಂದಹಾಗೆ ಸೋಮವಾರ ಪೂಜ್ಯ ಸ್ವಾಮೀಜಿಯವರ ಆಶಯದಂತೆ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ವಿದ್ಯುಕ್ತ ಉದ್ಘಾಟನೆಯ ನಿಮಿತ್ತವಾಗಿ ರವಿ ಶಾನಭಾಗ್ ಅವರು ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಹೂವಿನ ಎಸಳುಗಳ ರಂಗೋಲಿಯಲ್ಲಿ ಬಿಡಿಸಿ ಎಲ್ಲರ ಮೆಚ್ಚುಗೆ ಮತ್ತು ಅಭಿಮಾನ ಹಾಗೂ ಗೌರವಕ್ಕೆ ಪಾತ್ರರಾದರು. ಸಾಕ್ಷಾತ್ ಅಯೋಧ್ಯೆಯ ಶ್ರೀರಾಮ ಮಂದಿರವನ್ನೇ ಕಣ್ತುಂಬಿಕೊಂಡ ರೀತಿಯಲ್ಲಿ ರವಿ ಶಾನಭಾಗ್ ಅವರ ಕುಂಚದಲ್ಲಿ ಈ ಕಲಾಕೃತಿ ಅರಳಿದೆ.

ಪ್ರಾಂಜಲ ಗುಣ ಮನಸ್ಸಿನ, ನಯ ವಿನಯತೆಯ ರವಿ ಶಾನಭಾಗ್ ಅವರ ಕಲಾ ಸಾಧನೆಗೆ ನಿಮ್ಮೆಲ್ಲರ ಹರಕೆ ಹಾರೈಕೆ ಇರಲಿ ಎನ್ನುವುದೇ ನಮ್ಮ ಆಶಯ.