ಆಜಾದ್ ನಗರದ ಸ.ಕಿ.ಪ್ರಾಥಮಿಕ ಶಾಲೆಯ ನೂತನ‌ ಕೊಠಡಿಯ ಉದ್ಘಾಟನೆ

ದಾಂಡೇಲಿ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ 2022-23ನೇ ಸಾಲಿನ ವಿವೇಕ ಯೋಜನೆಯಡಿ ಮಂಜೂರಾಗಿ ನಿರ್ಮಾಣಗೊಂಡ ಆಜಾದ್ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಶನಿವಾರ ಉದ್ಘಾಟಿಸಿದರು.

ಶಾಲೆಗೆ ನೂತನ ಕೊಠಡಿಯನ್ನು ಮಂಜೂರು ಮಾಡಿಕೊಟ್ಟ ಆರ್.ವಿ.ದೇಶಪಾಂಡೆಯವರನ್ನು ವಾರ್ಡಿನ ಜನತೆಯ ಪರವಾಗಿ ನಗರಸಭಾ ಸದಸ್ಯ ಯಾಸ್ಮಿನ್ ಕಿತ್ತೂರು ಅವರು ಸನ್ಮಾನಿಸಿದರು.

ನಂತರ ಮಾತನಾಡಿದ ಯಾಸ್ಮಿನ್ ಕಿತ್ತೂರು ಅವರು ನಾನು ದೇಶಪಾಂಡೆಯವರಲ್ಲಿ ಶಾಲೆಯ ಕೊಠಡಿ ದುರಸ್ತಿಯ ಬಗ್ಗೆ ಮನವಿಯನ್ನು ಮಾಡಿದ್ದೇನು. ಮನವಿಯನ್ನು ಸ್ವೀಕರಿಸಿದ ದೇಶಪಾಂಡೆ ಅವರು ಕೊಠಡಿ ದುರಸ್ತಿ‌ ಮಾಡುವುದಕ್ಕಿಂತ ಹೊಸ ಕೊಠಡಿಯನ್ನು ಮಂಜೂರು ಮಾಡಿಸಿ ಕೊಡುತ್ತೇನೆಂದು ಭರವಸೆಯನ್ನು ನೀಡಿದ್ದರು. ಕೊಟ್ಟ ಮಾತಿನಂತೆ ಮಂಜೂರು ಮಾಡಿ ಇಂದು ಕೊಠಡಿ ನಿರ್ಮಾಣಗೊಂಡು ಉದ್ಘಾಟನೆಯಾಗಿದೆ‌ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ಅವರು ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಬೇಕೆಂಬ ಉದ್ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಪಾಲಕರು ತಮ್ಮ ಜವಾಬ್ದಾರಿಯನ್ನು ಅರಿತು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ್, ತಹಶೀಲ್ದಾರ್ ಶೈಲೇಶ್ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಹಾಲಮನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ, ನಗರ ಸಭೆಯ ನಿಕಟ ಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ್, ನಿಕಟ ಪೂರ್ವ ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಆರ್ ಹೆಗಡೆ, ಮುಖಂಡರಾದ ಮುನ್ನಾ ವಹಾಬ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಸ್ಥಳೀಯ ನಾಗರಿಕರು, ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಬಾಗವಹಿಸಿದ್ದರು