ವಯೋವೃದ್ಧರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿ: ಸುನೀಲ್ ದೇಸಾಯಿ.

ಜೋಯಿಡಾ : ಇತ್ತೀಚೆಗೆ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ವಯೋವೃದ್ಧರ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿರುವುದರಿಂದ ಅವರು ಗುಣಪಡಿಸಲಾಗದಂತಹ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಅವರಿಂದ ನಾವು ಎನ್ನುವುದನ್ನು ಅರಿತು ಅವರ ಆರೋಗ್ಯ ರಕ್ಷಣೆಗೆ ನಾವು ಹೆಚ್ಚಿನ ಆದ್ಯತೆ ನೀಡಬೇಕೆಂದು ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ನ್ಯಾಯವಾದಿಗಳಾದ ಸುನೀಲ್ ದೇಸಾಯಿ ಹೇಳಿದರು.

ಅವರು ಸಂಜೀವಿನಿ ಸೇವಾ ಟ್ರಸ್ಟ್, ಕ್ರೂಗರ್ ಫೌಂಡೇಶನ್ ಕಾರವಾರ, ಏಕಲ ಅಭಿಯಾನ ಬೆಳಗಾವಿ ಹಾಗೂ ಗ್ರಾಮ ಪಂಚಾಯತ್ ಗಾಂಗೋಡಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಲ್ಕರ್ಣಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಶಿಬಿರದಲ್ಲಿ ರೋಗಿಗಳ ತಪಾಸಣೆ ಮಾಡಿದ ನಂತರ ಕೆಲಸ ಮುಗಿಯುವುದಿಲ್ಲ. ಇಲ್ಲಿಂದ ನಿಜವಾದ ಕೆಲಸ ಆರಂಭವಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿರುವ ರೋಗಿಗಳಿಗೆ ಉಚಿತ ಮತ್ತು ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸಿ ಮನೆಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿಯ ಡಾ. ವೈಶಾಲಿ ಕಿತ್ತೂರ್ ಮಾತನಾಡಿ ಹಳ್ಳಿ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದರು. ಗಾಂಗೋಡಾ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ ದೇಸಾಯಿ, ಮಲ್ಕರ್ಣಿ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಮುಖ್ಯೋಪಾಧ್ಯಾಯರಾದ ಅರವಿಂದ ನಾಯ್ಕ ಅವರು ಶಿಬಿರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಶಿಬಿರದಲ್ಲಿ ಒಟ್ಟು 97 ರೋಗಿಗಳನ್ನು ತಪಾಸಣೆ ಮಾಡಲಾಯಿತು. ಹಾಗೂ 21 ಜನರಿಗೆ ಕನ್ನಡಕ ಹಾಗೂ ಔಷಧಿ ವಿತರಿಸಲಾಯಿತು. 17 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಅಯ್ಕೆ ಮಾಡಲಾಯ್ತು.

ಕಾರ್ಯಕ್ರಮದಲ್ಲಿ ಬೆಳಗಾವಿ ನೇತ್ರ ತಜ್ಞ ಡಾ. ಶ್ರೇಯಸ್, ಸಂಜೀವಿನಿ ಸೇವಾ ಟ್ರಸ್ಟ್ ನ ಗಣೇಶ ವಿರಕ್ತಮಠ, ಜಯಂತ ಗಾವಡಾ, ಈಶ್ವರ ವಡ್ಡರ, ಈಶ್ವರಿ ದೇಸಾಯಿ, ಬಸವಣ್ಣಯ್ಯ ಹಿರೇಮಠ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಭಾಂಡೋಳಕರ, ಅಂಗನವಾಡಿ ಕಾರ್ಯಕರ್ತೆ ಸುನಂದಾ ವೇಳಿಪ, ಪ್ರಮುಖರಾದ ಗಜಾನನ ಭಾಂಡೋಳಕರ ಮೊದಲಾದವರು ಭಾಗವಹಿಸಿದ್ದರು.