ಹೊಸ ವರ್ಷದಂದು ಅಯೋಧ್ಯೆಯಲ್ಲಿ ರಾಮ್ ಲಲ್ಲಾಗೆ 56 ನೈವೇದ್ಯ ಅರ್ಪಣೆ

ಅಯೋಧ್ಯೆ ಜನವರಿ 01: ಹೊಸ ವರ್ಷದ 2024 ರ ಮೊದಲ ದಿನದಂದು, ಉತ್ತರ ಪ್ರದೇಶದ (Uttar Pradesh) ಪವಿತ್ರ ಪಟ್ಟಣವಾದ ಅಯೋಧ್ಯೆಯಲ್ಲಿ (Ayodhya) ‘ರಾಮ್ ಲಲ್ಲಾ’ಗೆ 56 ನೈವೇದ್ಯ ಅರ್ಪಿಸಲಾಗುವುದು. ರಾಮಮಂದಿರದ (Ram mandir) ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ’56 ಭೋಗ್ ಪ್ರಸಾದ’ವನ್ನು ದೇವರಿಗೆ ಅರ್ಪಿಸಲಿದ್ದಾರೆ. ಈ ನೈವೇದ್ಯವು ರಸಗುಲ್ಲಾ, ಲಡ್ಡು, ಬರ್ಫಿ ಹೀಗೆ ವಿವಿಧ ರೀತಿಯ ಸಿಹಿಭಕ್ಷ್ಯಗಳನ್ನು ಒಳಗೊಂಡಿದೆ. ಹೊಸ ವರ್ಷದ ಸಂದರ್ಭದಲ್ಲಿ ದೇವರಿಗೆ 56 ನೈವೇದ್ಯ ಅರ್ಪಿಸುವುದು ಹಳೆಯ ಸಂಪ್ರದಾಯವಾಗಿದೆ. ಲಕ್ನೋದ ಪ್ರಸಿದ್ಧ ಅಂಗಡಿಯಾದ ‘ಮಧುರಿಮಾ’ದಿಂದ ಪ್ರಸಾದಕ್ಕಾಗಿ ಸಿಹಿ ಆರ್ಡರ್ ಮಾಡಲಾಗಿದೆ.

ರಾಮಲಲ್ಲಾ ಮಂದಿರ ನಿರ್ಮಾಣವಾಗುವಾಗ 56 ಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಕಲ್ಪವಾಗಿತ್ತು. 4 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದೇವೆ, ಜನವರಿ 22 ರಂದು ರಾಮಲಲ್ಲಾಗಾಗಿ ಮತ್ತೆ 56 ಬಗೆಯ ಭೋಗ್ ಪ್ರಸಾದವನ್ನು ತರಲಾಗುವುದು ಎಂದು ಮಧುರಿಮಾ ಸ್ವೀಟ್ ಅಂಗಡಿಯ ಮಾಲೀಕ ಸಜಲ್ ಗುಪ್ತಾ ಹೇಳಿದರು.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ವಿನೋದ್ ಬನ್ಸಾಲ್ ಅವರು ರಾಮ ಮಂದಿರದ ಶಂಕುಸ್ಥಾಪನೆಗಾಗಿ ಯಾಗ ನಡೆಸಿದರು. ಜನವರಿ 22 ರಂದು ನಡೆಯಲಿರುವ ರಾಮ ಮಂದಿರ ಉದ್ಘಾಟನೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರು ಆಗಮಿಸಲಿದ್ದಾರೆ.

ದೇವಾಲಯದ ಟ್ರಸ್ಟ್ ಪ್ರಕಾರ, ಜನವರಿ 16 ರಿಂದ ಏಳು ದಿನಗಳ ಕಾಲ ಪ್ರಾಣಪ್ರತಿಷ್ಠೆಗೆ ಕಾರ್ಯಕ್ರಮಗಳು ನಡೆಯಲಿದೆ.

ಜನವರಿ 22 ರಂದು ಮಧ್ಯಾಹ್ನ ಮತ್ತು 12.45 ರ ನಡುವೆ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲು ಟ್ರಸ್ಟ್ ನಿರ್ಧರಿಸಿದೆ. ವೈದಿಕ ಅರ್ಚಕರಾದ ಲಕ್ಷ್ಮೀಕಾಂತ ದೀಕ್ಷಿತ್ ಅವರು ಆ ದಿನದಂದು ಪ್ರಾಣ ಪ್ರತಿಷ್ಠೆಯಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.