ಅಪಘಾತದಲ್ಲಿ ಮೃತಪಟ್ಟ ಮೂವರು KSRTC ನೌಕರರ ಕುಟುಂಬಕ್ಕೆ ತಲಾ 1 ಕೋಟಿ ರೂಪಾಯಿ ಪರಿಹಾರ ವಿತರಣೆ

ಬೆಂಗಳೂರು, ಜ.1: ಅಪಘಾತದಲ್ಲಿ (Accident) ಮೃತಪಟ್ಟ ಕೆಎಸ್​ಆರ್​ಟಿಸಿ (KSRTC) ನೌಕರರ ಕುಟುಂಬದ ಸದಸ್ಯರನ್ನು ಹೊಸ ವರ್ಷದ ಅಂಗವಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ಇಂದು ಗೌರವಿಸಿದರು. ಅಲ್ಲದೆ, ಅಪಘಾತದಲ್ಲಿ ಮೃತಪಟ್ಟ ಮೂವರು ಸಿಬ್ಬಂದಿಯ ಅವಲಂಬಿತ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ವಿತರಣೆ ಮಾಡಿದರು. ಕಳೆದ ಒಂದು ವರ್ಷದಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ ಒಟ್ಟು 12 ಸಿಬ್ಬಂದಿಯ ಅವಲಂಬಿತರಿಗೆ ತಲಾ 1 ಕೋಟಿ ರೂ. ಪರಿಹಾರದ ಮೊತ್ತವನ್ನು ಪಾವತಿಸಲಾಗಿದೆ.

ಮೃತ ಅವಲಂಬಿತರ ಕುಟುಂಬದವರಿಗೆ ಸೀರೆ ಮತ್ತು ಸಿಹಿಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಮನೆಯ ಸದಸ್ಯನನ್ನು ಕಳೆದುಕೊಂಡ ಕುಟುಂಬದವರಿಗೆ ಯಾವ ರೀತಿಯಿಂದಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದರೆ ಆರ್ಥಿಕವಾಗಿ ಅವರಿಗೆ ಶಕ್ತಿ ಮತ್ತು ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ನಾವು ಮಾಡುತ್ತಿದ್ದೇವೆ. ಕೋಟಿ ಹಣದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಮನೆ ಮಾಡಿಕೊಂಡು ಯಾರನ್ನು ಅವಲಂಬಿಸದೆ ಬದುಕು‌ ನಡೆಸಬಹುದಾಗಿದೆ ಎಂದರು.

ಈ ಹಿಂದೆ ಅಪಘಾತ ಸೇರಿದಂತೆ ಇತರ ಕಾರಣಗಳಿಂದ ಮೃತಪಟ್ಟ ಕುಟುಂಬದವರಿಗೆ 3 ಲಕ್ಷ ರೂ.ಗಳನ್ನು ಮಾತ್ರ ನೀಡಲಾಗುತ್ತಿತ್ತು. ಸಾರಿಗೆ ಸುರಕ್ಷಾ ಅಪಘಾತ ವಿಮಾ ಪರಿಹಾರ ಯೋಜನೆ ನಿಗಮದಲ್ಲಿ ಸೇವೆಯಲ್ಲಿರುವಾಗ ಸಿಬ್ಬಂದಿಗಳು ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ, ಅದೇರೀತಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಅಂಗನ್ಯೂನ್ಯತೆಗೆ ಒಳಗಾದಲ್ಲಿ ಸಿಬ್ಬಂದಿಗಳಿಗೆ ಹೆಚ್ಚಿನ ಮೊತ್ತದ ಆರ್ಥಿಕ ಪರಿಹಾರ ಒದಗಿಸುವ ಮೂಲಕ ಅವರ ಜೀವನಕ್ಕೆ ಭದ್ರತೆ ಒದಗಿಸುವ ಉದ್ದೇಶದಿಂದ 50 ಲಕ್ಷ (ಯುನೈಟೆಡ್ ಇಂಡಿಯಾ ಇನ್ಸುರೆನ್ಸ್) ಹಾಗೂ SBI Corporate Salary Package ಅಡಿಯಲ್ಲಿ 50 ಲಕ್ಷ ರೂ. ನೀಡಲಾಗುತ್ತಿದೆ.

  • ಈ ಯೋಜನೆ ಅಡಿಯಲ್ಲಿ ಖಾಸಗಿ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟ ನೌಕರರ ನಾಮನಿರ್ದೇಶಿತರಿಗೆ ಒಟ್ಟು 1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ನೀಡಲಾಗುತ್ತದೆ.
  • ಸಾರಿಗೆ ನಿಗಮಗಳಲ್ಲಿ ದೇಶದಲ್ಲಿಯೇ ಈ ಯೋಜನೆಯನ್ನು ಪ್ರಥಮ ಬಾರಿಗೆ ಕರಾರಸಾ ನಿಗಮದಲ್ಲಿ ಜಾರಿಗೊಳಿಸಲಾಗಿತ್ತು,‌ ನಂತರ ಇತರೆ ನಿಗಮಗಳಲ್ಲಿಯೂ ಜಾರಿಗೆಗೊಳಿಸಲಾಗಿದೆ.
  • ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ.
  • ಇದುವರೆವಿಗೂ 9 ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂ.ಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ.
  • ಇದೀಗ ಮೃತಪಟ್ಟ ಮೂವರು ನೌಕರರ ಅವಲಂಬಿತರಿಗೆ 1 ಕೋಟಿ ರೂ.ಗಳ ಅಪಘಾತ ವಿಮಾ ಮೊತ್ತವನ್ನು ವಿತರಿಸಲಾಗಿದೆ.

ಮೃತಪಟ್ಟ ಸಿಬ್ಬಂದಿ ವಿವರ

ಮೈಸೂರು ವಿಭಾಗದ ವಿಜಯನಗರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಬಿ.ಎಂ ಪುಟ್ಟಸ್ವಾಮಿ ಅವರು 2023ರ ಜನವರಿ 25 ರಂದು ಬೈಕ್ ಮತ್ತು ಕಾರು ನಡುವಿನ ಅಪಘಾತದಲ್ಲಿ ಮೃತಪಟ್ಟಿದ್ದರು. ಪುಟ್ಟಸ್ವಾಮಿ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಇವರು ಸಾರಿಗೆ ಇಲಾಖೆಯಲ್ಲಿ 26 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ 1 ಕೋಟಿ ರೂ. ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ 18.74 ಲಕ್ಷ ರೂ. ವಿತರಿಸಲಾಗಿದೆ.

ಪುತ್ತೂರು ವಿಭಾಗದ ಧರ್ಮಸ್ಥಳ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಅಶೋಕ್ ಕುಮಾರ್, 2023ರ ಮೇ 24 ರಂದು ಅಪಘಾತದಲ್ಲಿ ಮೃತಪಟ್ಟಿದ್ದರು. ಅಶೋಕ್ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿತ್ತು. ಇವರು 12 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಇವರ ಕುಟುಂಬಕ್ಕೆ ಅಪಘಾತ ವಿಮಾ ಯೋಜನೆಯ 1 ಕೋಟಿ ರೂ. ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, DRBF, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ 21.01 ಲಕ್ಷ ರೂ. ವಿತರಿಸಲಾಗಿದೆ.

ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-5ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ-ಕಂ-ನಿರ್ವಾಹಕ ರಮೇಶ ಜಿ. 2023ರ ಜೂನ್ 28 ರಂದು ಅಪಘಾತದಲ್ಲಿ ಮೃತಪಟ್ಟಿದ್ದರು. ಮಡಿಕೇರಿ-ಬೆಂಗಳೂರು ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು. ಇವರು 20 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಪತ್ನಿ ಹಾಗೂ ಒಬ್ಬ ಮಗನನ್ನು ಹೊಂದಿದ್ದರು. ಇವರ ಕುಟುಂಬಕ್ಕೆ 1 ಕೋಟಿ ರೂ. ಹಾಗೂ ಉಪದಾನ, ಭವಿಷ್ಯ ನಿಧಿ, ರಜೆ ನಗದೀಕರಣ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಗುಂಪು ವಿಮಾ ಯೋಜನೆ ಇತ್ಯಾದಿಗಳಿಂದ 24.81 ಲಕ್ಷ ರೂ. ವಿತರಿಸಲಾಗಿದೆ.

ಪರಿಹಾರ ವಿತರಣೆ ಹಾಗೂ ಗೌರವ ಸಲ್ಲಿಕೆ ಸಮಾರಂಭದಲ್ಲಿ ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ನಿರ್ದೇಶಕರು (ಸಿ ಮತ್ತು ಜಾ) ಡಾ. ನಂದಿನಿ ದೇವಿ ಕೆ., ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಗಳ ಕುಟುಂಬ ವರ್ಗ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.