ಹಣ ಡಬಲ್ ಮಾಡಿ‌ ಕೊಡುವುದಾಗಿ 25 ಲಕ್ಷ ರೂ. ವಂಚನೆ; ಪೊಲೀಸ್​ ಬಲೆಗೆ ಬಿದ್ದ 6 ಜನರ ಗ್ಯಾಂಗ್

ಬೆಳಗಾವಿ, ಡಿ.29: ಹಣ ಡಬಲ್ ಮಾಡಿ‌ ಕೊಡುವುದಾಗಿ 25 ಲಕ್ಷ ರೂ. ವಂಚಿಸಿ ಪರಾರಿಯಾದ ಗ್ಯಾಂಗ್​ನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನ ವಿದ್ಯಾನಗರದಲ್ಲಿ ವಾಸವಾಗಿದ್ದ ಸಿದ್ದನಗೌಡ ಬಿರಾದಾರ್ ಎಂಬುವವರಿಗೆ ಕಳೆದ ನವೆಂಬರ್​ನಲ್ಲಿ ವಂಚನೆ ಮಾಡಿದ್ದರು. ಈ ಹಿನ್ನಲೆ ಸಿದ್ದನಗೌಡ ಅವರು ಪ್ರಕರಣ ದಾಖಲಿಸಿದ್ದರು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಇದೀಗ ಆರು ಜನ ಖದೀಮರ ಗ್ಯಾಂಗ್​ನ್ನು ಅರೆಸ್ಟ್​ ಮಾಡಿದ್ದಾರೆ.

ಘಟನೆ ವಿವರ

ಕೊಲ್ಹಾಪುರದಿಂದ ಬಸ್​ನಲ್ಲಿ ಬರುವಾಗ ಸಿದ್ದನಗೌಡರಿಗೆ ಈ ಖದೀಮರ ಗ್ಯಾಂಗ್​ನ ಸದಸ್ಯೆ ಜಾಹ್ನವಿ ಪರಿಚಯ ಆಗಿದ್ದರು. ಬಳಿಕ ನಂಬರ್ ಕೂಡ ಎಕ್ಸಚೇಂಜ್ ಮಾಡಿಕೊಂಡಿದ್ದ ಮಹಿಳೆ, ನಮ್ಮಣ್ಣ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಾನೆ. ನಿಮ್ಮ ಹಣ ಡಬಲ್ ಮಾಡಿ ಕೊಡುತ್ತೇವೆ ಎಂದು ಅವರನ್ನು ನಂಬಿಸಿ, ತನ್ನ ಕೆಡ್ಡಾಗೆ ಕೆಡವಿದ್ದಾಳೆ. ಎಲ್ಲವೂ ತಾನು ಅಂದುಕೊಂಡಂತೆ ಆಗುತ್ತಿದ್ದಂತೆ, ಸಿದ್ದನಗೌಡರಿಗೆ ಯಮಕನಮರಡಿಯ ಹೊಟೇಲ್ ಒಂದರಲ್ಲಿ ಹಣ ತರಲು ಹೇಳಿದ್ದಾಳೆ.

ಹಣ ತಂದ ನಂತರ ನಕಲಿ ಪೊಲೀಸರಿಂದ ದಾಳಿ

ಇನ್ನು ಸಿದ್ದನಗೌಡ ಅವರು ಹಣ ತಂದ ನಂತರ ಅವರದೇ ಗ್ಯಾಂಗ್​ನ ನಕಲಿ ಪೊಲೀಸರಿಂದ ದಾಳಿ ಮಾಡಿಸಿ, ಜಾಹ್ನವಿಯನ್ನು ಅರೆಸ್ಟ್ ಮಡಿದ್ದ ನಕಲಿ ಪೊಲೀಸರು, ಹಣದ ಜೊತೆಗೆ ಜಾಹ್ನವಿಯನ್ನು ಕರೆದುಕೊಂಡು ಪರಾರಿಯಾಗಿದ್ದರು. ಬಳಿಕ ಸಿದ್ದನಗೌಡ ಅವರಿಗೆ ತಾನು ಮೋಸ ಹೋಗಿದ್ದು ಗೊತ್ತಾದ ಬಳಿಕ ಕಾಕತಿ ಠಾಣೆಗೆ ಬಂದು ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿ ದೂರು ನೀಡಿದ್ದರು. ಅದರಂತೆ ದೂರು ದಾಖಲಿಸಿಕೊಂಡ ಪೊಲೀಸರು, ಮಾರು ವೇಷದಲ್ಲಿ ಹೋಗಿ ಹಣ ಡಬಲ್ ಮಾಡಿಕೊಡಿ ಎಂದು ಹೇಳಿ ಖದೀಮರ ಗ್ಯಾಂಗ್​ನ್ನು ಕೆಡ್ಡಾಗೆ ಕೆಡುವಿದ್ದಾರೆ. ಇದೀಗ ಮಾರುವೇಷ ಹಾಕಿ 6 ಜನರನ್ನು ಬಂಧಿಸಿದ್ದಾರೆ.‘