ಚಿತ್ರದುರ್ಗ: ಕೆಜಿಗೆ 300 ರೂ ಏರಿಕೆ ಬೆನ್ನಲೇ 6 ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ

ಚಿತ್ರದುರ್ಗ, ಡಿಸೆಂಬರ್​​ 13: ಕೆಲ ತಿಂಗಳ ಹಿಂದೆ ಟೊಮೆಟೊ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅದೇ ರೀತಿ ಈರುಳ್ಳಿ ಬೆಲೆ ಕೂಡ ಜಾಸ್ತಿ ಆಗಿತ್ತು. ಹಾಗಾಗಿ ಯಾರೂ ಕಳ್ಳತನ ಮಾಡಬಾರದು ಎಂದು ಕಾವಲುಗಾರರನ್ನು ನೇಮಿಸಿದ್ದರು. ಆದರೂ ಹಲವೆಡೆ ಕಳ್ಳತನ ನಡೆದಿದ್ದವು. ಇದೀಗ ಬೆಳ್ಳುಳ್ಳಿ ದರ ಹೆಚ್ಚಾಗುತ್ತಿದ್ದಂತೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸುಮಾರು 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನಲ್ಲಿರುವ ದಂಡಿನ ಕುರುಬರಹಳ್ಳಿ ಗ್ರಾಮದ ಬಳಿಯ ಗೋದಾಮಿನಲ್ಲಿ ನಡೆದಿದೆ.

ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿದ್ದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ವ್ಯಾಪಾರಿ ಬಸವ ಕಿರಣ್​​ಗೆ ಸೇರಿದ ಬೆಳ್ಳುಳ್ಳಿ ಇದಾಗಿತ್ತು. ​ಮಧ್ಯ ಪ್ರದೇಶದಿಂದ ಖರೀದಿಸಿ ತಂದು ಗೋದಾಮಿನಲ್ಲಿರಿಸಿದ್ದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.