ಟಿಪ್ಪರ್ ಹಾಯಿಸಿ ಕೊಲೆ ಪ್ರಕರಣ; ಕುಷ್ಟಗಿಯಲ್ಲಿ ಆರೋಪಿ ಬಂಧನ

ಹೊನ್ನಾವರ: ಕಳೆದ ಮಂಗಳವಾರ ರಾತ್ರಿ ತಾಲೂಕಿನ ಅರೆಅಂಗಡಿಯಲ್ಲಿ ಟಿಪ್ಪರ್ ಹಾಯಿಸಿ, ವ್ಯಕ್ತಿಯೋರ್ವನನ್ನು ಕೊಂದು, ಇನ್ನಿಬ್ಬರಿಗೆ ಗಾಯಪಡಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಡಿನಬಾಳದ ವಿನಾಯಕ ಭಟ್ಟನನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ನಡೆದ ನಂತರ ಆರೋಪಿ ವಿನಾಯಕನು ಕೊಪ್ಪಳದ ಕುಷ್ಟಗಿಯಲ್ಲಿ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಯನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ. ಹೊನ್ನಾವರಕ್ಕೆ ಆರೋಪಿಯನ್ನು ಕರೆತರಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.

ಪೊಲೀಸರು ಈತನ ಹೊರತಾಗಿ ಇನ್ನೂ ಕೆಲವರನ್ನು ವಿಚಾರಣೆ ನಡೆಸುತ್ತಿರುವುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.