ಮಂಡ್ಯ: ಕಾಡಾನೆ ತುಳಿತಕ್ಕೆ ಮತ್ತೋರ್ವ ಕಾರ್ಮಿಕ ಮಹಿಳೆ ಬಲಿ

ಮಂಡ್ಯ, (ನವೆಂಬರ್ 19): ಕಾಡು ಪ್ರಾಣಿ ಹಾಗೂ ಮಾನವ ಸಂಘರ್ಷ ಮುಂದುವರೆದಿದೆ. ಮಂಡ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಂಡ್ಯ ತಾಲ್ಲೂಕಿನ ಲಾಳನಕೆರೆ-ಪೀಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಲಾಳನಕೆರೆ ಗ್ರಾಮದ ಸಾಕಮ್ಮ(40) ಮೃತ ಮಹಿಳೆ. ಬೆಳಗ್ಗೆ ಜಮೀನು ಬಳಿ ಹೋಗಿದ್ದಾಗ ಆನೆ ತುಳಿದು ಸಾಯಿಸಿದೆ. ಈ ವಿಷಯ ತಿಳಿದು ಸ್ಥಳಕ್ಕೆಅರಣ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಇನ್ನು ಈ ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಸಫಾರಿ ವಾಹನದ ಮೇಲೆ ದಾಳಿಗೆ ಯತ್ನಿಸಿದ ಆನೆ

ಮೈಸೂರು: ಇನ್ನೊಂದೆಡೆ ನಾಗರಹೊಳೆ ಅಭಯಾರಣ್ಯದಲ್ಲಿ ಆನೆಯೊಂದು ಸಫಾರಿ ವಾಹನದ ಮೇಲೆ ದಾಳಿಗೆ ಯತ್ನಿಸಿರುವ ಘಟನೆ ನಡೆದಿದೆ. ಹುಣಸೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸಫಾರಿ ಹೋಗುತ್ತಿದ್ದ ವಾಹನ ಕಂಡು ಆನೆಯೊಂದು ದಾಳಿಗೆ ಮುಂದಾಗಿದೆ. ಸಫಾರಿ ವಾಹನ ಹತ್ತಿರ ಬರುತ್ತಿದ್ದಂತೆಯೇ ಆನೆ ಅಟ್ಟಿಸಿಕೊಂಡು ಬಂದಿದೆ. ತಕ್ಷಣ ಚಾಲಕ ಸಫಾರಿ ವಾಹನವನ್ನು ತಕ್ಷಣ ಹಿಮ್ಮುಖವಾಗಿ ಚಲಾಯಿಸಿಕೊಂಡು ಹೋಗಿದ್ದಾರೆ. ಆದರೂ ಸಹ ಆನೆ ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದು ಬಳಿ ವಾಪಸ್ಸಾಗಿದೆ. ಆನೆ ದಾಳಿಗೆ ಮುಂದಾಗಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದೆ.