ಚಿಕ್ಕಮಗಳೂರು: ಕಾಂಗ್ರೆಸ್​ ವಿರುದ್ಧ ಪೋಸ್ಟರ್ ಅಂಟಿಸಿದ್ದ ಐವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್​ಐಆರ್​

ಚಿಕ್ಕಮಗಳೂರು, ನವೆಂಬರ್​​​ 18: ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಂಟಿಸಿದ್ದ 5 ಜನ ಬಿಜೆಪಿ ಕಾರ್ಯಕರ್ತರ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕಾಂಗ್ರೆಸ್ ಗ್ಯಾರಂಟಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ಯತೀಂದ್ರ ಮತ್ತು ಕೆ‌ಜೆ ಜಾರ್ಜ್ ವಿರುದ್ಧ ವ್ಯಂಗ್ಯ ಪೋಸ್ಟರ್​​ ಅಂಟಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ, ಶಶಿ ಅಲ್ದೂರು, ಸೇರಿದಂತೆ ಐವರ ವಿರುದ್ಧ ಎಫ್​ಐಆರ್​ ಹಾಕಲಾಗಿದೆ. ತಾಲೂಕು ಕಚೇರಿ, KEB ಕಚೇರಿ ಸೇರಿದಂತೆ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಪೋಸ್ಟರ್ ಅಂಟಿಸಿದ್ದರು.

ಮೈಸೂರಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದ ವಿಡಿಯೋ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಬಿಜೆಪಿ, ಜೆಡಿಎಸ್​ ನಾಯಕರು ಒಮ್ಮೆಲೆ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರನ ವಿರುದ್ಧ ಮುಗಿಬಿದ್ದಿದ್ದರು. ಸದ್ಯ ಇದು ಬೂದಿ ಮುಚ್ಚಿದ ಕೆಂಡದಂತಿರುವಾಗ ಚಿಕ್ಕಮಗಳೂರಿನಲ್ಲಿ ಪೋಸ್ಟರ್​ ವಾರ್​ ಜೋರಾಗಿದೆ.

ಪೋಸ್ಟರ್​ನಲ್ಲಿ ವೈಎಸ್​ಟಿ ಸಂಗ್ರಹ ಸಮಿತಿಯ ಸುತ್ತೋಲೆ ಎಂದು ಬರೆದು ಲೇವಡಿ ಮಾಡಿರುವ ಬಿಜೆಪಿ ‘ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ ಅಂತ ಟೀಕಿಸಿದೆ. ಕಾಂಗ್ರೆಸ್​ನಿಂದ ಹಗಲು ದರೋಡೆ ಅಂತ ಸಿಕ್ಕ ಸಿಕ್ಕ ಕಡೆಗಳೆಲ್ಲಾ ಅಂಟಿಸಲಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪೋಸ್ಟರ್ ತೆರವು ಮಾಡಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಕಡಿತ ಸಮಸ್ಯೆಯನ್ನು ಜನರು ಅನುಭವಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಇಂಧನ ಇಲಾಖೆ ಸಚಿವರ ವಿರುದ್ಧ ಪೋಸ್ಟರ್ ಅಂಟಿಸಲಾಗಿದೆ. ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವ ಕೆ.ಜೆ ಜಾಜ್೯ ಕಾಣೆಯಾಗಿದ್ದಾರೆ‌. ಹುಡುಕಿಕೊಟ್ಟವರಿಗೆ ಕನಿಷ್ಠ ಸಿಂಗಲ್ ಫೇಸ್ ವಿದ್ಯುತ್ ಉಚಿತ, ಖಚಿತ, ನಿಶ್ಚಿತ ಎಂದು ಪೋಸ್ಟರ್​ನಲ್ಲಿ ಬರೆಯಲಾಗಿದೆ.

ಕಾಂಗ್ರೆಸ್ ಹೈಕಮಾಂಡ್​ಗೆ ಕರ್ನಾಟಕ ಎಟಿಎಂ ಎಂದು ಬಿಜೆಪಿ ಆರೋಪಿಸುತ್ತಲೇ ಇದೆ. ಇದೀಗ ಪೋಸ್ಟರ್​ ಮೂಲಕವೂ ಆರೋಪಿಸಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಕೆಜೆ ಜಾರ್ಜ್ ಸಂಭಾಷಣೆ ನಡೆಸುವ ರೀತಿಯಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಈ ತಿಂಗಳ ಕಪ್ಪ ಎಲ್ಲಿ ಎಂದು ಸೋನಿಯಾ ಗಾಂಧಿ ಕೇಳುತ್ತಾರೆ. ಇದಕ್ಕೆ ಕೆಜೆ ಜಾರ್ಜ್, ಈಗ ತಾನೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದೀವಿ. ಬರುತ್ತೆ ತಡೀರಿ ಮೇಡಂ ಎಂದು ಹೇಳುವ ರೀತಿ ಬರೆಯಲಾಗಿದೆ.