ರಾಜಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ನಿಧನ

ರಾಜಸ್ಥಾನದಲ್ಲಿ ಈಗಾಗಲೇ ವಿಧಾನಸಭೆ ಚುನಾವಣೆ ರಂಗೇರಿದ್ದು, ಎಲ್ಲ ಪಕ್ಷಗಳು ಭರದಿಂದ ಪ್ರಚಾರ ಶುರು ಮಾಡಿದೆ. ಈ ನೆಡುವೆ ಕಾಂಗ್ರೆಸ್​​​ಗೆ ಒಂದು ಅಘಾತ ಎದುರಾಗಿದೆ. ರಾಜಸ್ಥಾನದ ಕರಣ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನರ್ ಅವರು ದೆಹಲಿಯ ಏಮ್ಸ್‌ನಲ್ಲಿ ನಿಧನರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಬುಧವಾರ ಬೆಳಿಗ್ಗೆ ವರದಿ ಮಾಡಿದೆ. ಗುರ್ಮೀತ್ ಸಿಂಗ್ ಕೂನರ್ ಅವರಿಗೆ 75 ವರ್ಷವಾಗಿದ್ದು, ಕರಣಪುರದ ಹಾಲಿ ಶಾಸಕರಾಗಿದ್ದರು.

ಕೂನರ್ ಅವರನ್ನು ನವೆಂಬರ್ 12 ರಂದು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನ ಜೆರಿಯಾಟ್ರಿಕ್ ಮೆಡಿಸಿನ್ ವಾರ್ಡ್‌ಗೆ ದಾಖಲಿಸಲಾಗಿತ್ತು. ಅವರು ಸೆಪ್ಟಿಕ್ ಆಘಾತ ಮತ್ತು ಮೂತ್ರಪಿಂಡದ ಕಾಯಿಲೆಯಿಂದ ಸೆಪ್ಸಿಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ನೀಡಿದ ಮರಣ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಇದರ ಜತೆಗೆ ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿದ್ದರು ಎಂದು ಹೇಳಲಾಗಿದೆ. ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದೆ.

ರಾಜಸ್ಥಾನದ ಶ್ರೀಗಂಗಾನಗರದ ಪದಂಪುರ ತೆಹಸಿಲ್‌ನಲ್ಲಿ ಜನಿಸಿದ ಕೂನರ್, ಜಿಲ್ಲಾ ಘಟಕದಲ್ಲಿ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರು. 2018 ರಲ್ಲಿ, ಕೂನರ್ ಪ್ರತಿಸ್ಪರ್ಧಿ ಪೃಥ್ವಿಪಾಲ್ ಸಿಂಗ್ ಸಂಧು ಅವರನ್ನು ಸೋಲಿಸಿ, ಭಾರಿ ಬಹುಮತದಿಂದ ಗೆದ್ದರು. ಇದೀಗ ಅವರು ಮರಣದ ನಂತರ ಶ್ರೀಕರನ್‌ಪುರ ಕ್ಷೇತ್ರದ ಚುನಾವಣೆಯ ದಿನಾಂಕವನ್ನು ಮುಂದೂಡಲಾಗುತ್ತದೆ ಎಂದು ಹೇಳಲಾಗಿದೆ.