30 ವರ್ಷಗಳ ಕಾಲ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧ

ಸಿದ್ದಾಪುರ: ಕಳೆದ 30 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಸುಬೇದಾರ್ ಆಗಿ ನಿವೃತ್ತಿ ಹೊಂದಿದ್ದ ಸಿದ್ದಾಪುರ ತಾಲೂಕಿನ ಹಲಗೇರಿಯ ಜಯರಾಮ ನಾಯ್ಕ ಅವರಿಗೆ ಗುರುವಾರ ಹುಟ್ಟೂರಿನಲ್ಲಿ ಅಭೂತಪೂರ್ವ ಸ್ವಾಗತ ನೀಡಿ ಸನ್ಮಾನಿಸಲಾಯಿತು.
ತಾಯ್ನಾಡಿಗೆ ಆಗಮಿಸಿದ ಜಯರಾಮ ಕೆ ನಾಯ್ಕ ಅವರನ್ನು ಸಿದ್ದಾಪುರದಿಂದ ಹಲಗೇರಿವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಹುಟ್ಟೂರಿಗೆ ಕರೆ ತರುತ್ತಿದ್ದಂತೆ ಹಲಗೇರಿಯ ದೇವಸ್ಥಾನದ ಎದುರು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಅಲ್ಲಿಂದ ಪೂರ್ಣಕುಂಭದೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ಸಭಾಭವನದವರೆಗೆ ಮೆರವಣಿಗೆ ನಡೆಸಲಾಯಿತು.
ತಾಲೂಕಾ ಮಾಜಿ ಸೈನಿಕರ ಸಂಘ, ಕರ್ನಾಟಕ ಪಬ್ಲಿಕ್ ಶಾಲೆ ಹಲಗೇರಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಏರ್ಪಡಿಸಲಾದ ಸಮಾರಂಭದಲ್ಲಿ ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ಯೋಧ ಜಯರಾಮ ನಾಯ್ಕ ದಂಪತಿಯನ್ನು ಹೃದಯಸ್ಪರ್ಷಿಯಾಗಿ ಸನ್ಮಾನಿಸಿದರು.