ಶಿರಸಿಯಲ್ಲಿ ಸಂಭ್ರಮದಿಂದ ನಾಗರ ಪಂಚಮಿ ಆಚರಣೆ

ಶಿರಸಿ: ಹಿಂದುಗಳ ವರ್ಷದ ಪ್ರಥಮ ಪವಿತ್ರ ಹಬ್ಬವಾದ ನಾಗರ ಪಂಚಮಿಯನ್ನು ತಾಲೂಕಿನಾದ್ಯಂತ ಭಕ್ತಿ ಭಾವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಇತಿಹಾಸ ಪ್ರಸಿದ್ದ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಕಿರುವ ನಾಗರ ಕಟ್ಟಗೆ ಹಾಲೆರೆಯಲು ಭಕ್ತರ ದಂಡೇ ಹರಿದು ಬಂದಿತ್ತು. ದೇವಸ್ಥಾನದಿಂದ ಆರಂಭವಾದ ಸರತಿ ಸಾಲು ಕುಮಟಾ ಮುಖ್ಯ ರಸ್ತೆಯಲ್ಕಿರುವ ಪೆಟ್ರೋಲ್ ಬಂಕ್‌ವರೆಗೂ ಹೋಗಿತ್ತು.

ಮದ್ಯಾಹ್ನವಾದಂತೆ ಕ್ರಮೇಣವಾಗಿ ಭಕ್ತರ ಸಾಲು ಇಳಿಮುಖಗೊಂಡಿತು. ಸುಬ್ರಹ್ಮಣ್ಯ ದೇವಸ್ಥಾನದ ಪಕ್ಕದಲ್ಕಿರುವ ನಾಗರಕಟ್ಟೆಗೆ ಹಾಲೆರೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರು ಮೂದಲು ನಾಗರಕಟ್ಟಗೆ ಹಾಲೆರೆದ ಬಳಿಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

ಇದೇ ರೀತಿ ನಗರದ ಪ್ರಮುಖ ದೇವಸ್ಥಾನಗಳ ನಾಗರ ಕಟ್ಟೆಗಳಲ್ಲೂ ಭಕ್ತರು ಬೆಳಿಗ್ಗೆ ಆರು ಗಂಟೆಯಿಂದಲೇ ಕುಟುಂಬ ಸಮೇತರಾಗಿ ತೆರಳಿ ಹಾಲು ಎರೆಯುತ್ತಿದ್ದ ಸನ್ನಿವೇಶ ಕಂಡು ಬಂತು. ಗ್ರಾಮೀಣ ಪ್ರದೇಶದಲ್ಲಿ ತಮ್ಮ ಹೊಲದಲ್ಲಿರುವ ನಾಗರ ಮೂರ್ತಿಗೆ ಚಪ್ಪರ ಹಾಕಿ ವಿವಿಧ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.