ದಾಂಡೇಲಿಯಲ್ಲಿ ಅ:15 ರಿಂದ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಸಂಭ್ರಮ – ಸುನೀಲ್ ಹೆಗಡೆ

ದಾಂಡೇಲಿ : ಕೈಗಾರಿಕಾ, ಪ್ರವಾಸಿ ಹಾಗೂ ಸಾಂಸ್ಕೃತಿಕ ನಗರವಾದ ದಾಂಡೇಲಿಯಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಆಶ್ರಯದಡಿ ದ್ವಿತೀಯ ಬಾರಿಗೆ ದುರ್ಗಾದೇವಿ ಪ್ರತಿಷ್ಟಾಪನೆ ಹಾಗೂ ನವರಾತ್ರಿ ಉತ್ಸವವನ್ನು ಆಯೋಜಿಸಲು ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಗೌರವಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸುನೀಲ್ ಹೆಗಡೆಯವರು ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ನವರಾತ್ರಿ ಉತ್ಸವದ ರೂಪುರೇಷೆ ಮತ್ತು ಸಿದ್ಧತೆಗಳ ಬಗ್ಗೆ ಮಾತನಾಡಿದರು. ಸರ್ವಧರ್ಮ ಸಮನ್ವಯತೆಯ ನಗರವಾದ ದಾಂಡೇಲಿಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಸದೃಢತೆಯ ಜೊತೆಗೆ ನಮ್ಮ ಸನಾತನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ಸದುದ್ದೇಶದಿಂದ ಹಾಗೂ ನಮ್ಮ ನಾಡ ಪರಂಪರೆಯ ಭಕ್ತಿ ಪ್ರಧಾನವಾದ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾಗಿರುವ ನವರಾತ್ರಿ ಹಬ್ಬವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಬೇಕೆಂಬ ಮಹತ್ವದ ಸಂಕಲ್ಪದಡಿಯಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯಡಿ ನವರಾತ್ರಿ ಉತ್ಸವವನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಗರದ ಹಳೆ ನಗರ ಸಭಾ ಮೈದಾನದಲ್ಲಿ ಅದ್ದೂರಿಯಾಗಿ ಹಾಗೂ ಸಂಭ್ರಮ, ಸಡಗರದಿಂದ ದುರ್ಗಾದೇವಿಯ ಪ್ರತಿಷ್ಟಾಪನೆ ಹಾಗೂ ನವರಾತ್ರಿ ಉತ್ಸವವನ್ನು ಆಚರಿಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ನಡೆಸಲಾಗಿದೆ. ಈ ಉತ್ಸವ ದಾಂಡೇಲಿಗರ ಉತ್ಸವವಾಗಬೇಕೆಂಬ ಉದ್ದೇಶದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಬರುವ ಅ:15 ರಿಂದ ಆರಂಭಗೊಂಡು ಅ:23 ರವರೆಗೆ ನವರಾತ್ರಿ ಉತ್ಸವ ನಡೆಯಲಿದ್ದು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ದಾಂಡೇಲಿ ನವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ಬಾಲಮಣಿ (ಬೇಟಾ), ಸಮಿತಿಯ ಪದಾಧಿಕಾರಿಗಳಾದ ಎಸ್.ಪ್ರಕಾಶ ಶೆಟ್ಟಿ, ರೋಶನ್ ನೇತ್ರಾವಳಿ, ಅಶುತೋಷ್ ರಾಯ್, ನವೀನ್ ಕಾಮತ್, ಬಸವರಾಜ ಕಲಶೆಟ್ಟಿ, ಗುರು ಮಠಪತಿ, ಸುಧಾಕರ ಶೆಟ್ಟಿ, ಸುರೇಶ ಕಾಮತ್, ನರೇಂದ್ರ ಚೌವ್ಹಾನ್, ಪ್ರಶಾಂತ್ ಬಸೂರ್ತೆಕರ್, ರವಿ ಗಾಂವಕರ, ಬುದ್ಧಿವಂತಗೌಡ ಪಾಟೀಲ, ದಶರಥ ಬಂಡಿವಡ್ಡರ, ರೂಪೇಶ್ ಪವಾರ್ ಮೊದಲಾದವರು ಉಪಸ್ಥಿತರಿದ್ದರು.

ಸಂದೇಶ ಜೈನ್‌ ನುಡಿಸಿರಿ ನ್ಯೂಸ್‌ ದಾಂಡೇಲಿ