ಭತ್ತದ ಬೆಳೆಗೆ ಕೀಟ ಬಾಧೆ ಹಾಗೂ ಮಳೆಯ ಕೊರತೆಯಿಂದ ಬೆಳೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿರೋಗ

ಜೋಯಿಡಾ: ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕೊರತೆಯಿದ್ದು, ತುಂತುರು ಮಳೆಯಿಂದಾಗಿ ಬೆಳೆಗಳಲ್ಲಿ ಬೆಂಕಿರೋಗ ಕಾಣಿಸಿಕೊಂಡಿದೆ. ಮಳೆಯ ಕೊರತೆಯಿಂದ ಹಲವೆಡೆ ಬೆಳೆಗಳು ಅಪಾಯದಂಚಿನಲ್ಲಿದ್ದು, ರೈತರು ಹತಾಶರಾಗಿದ್ದಾರೆ.

ಕಳೆದ ವಾರವಷ್ಟೇ ಸುರಿದ ಮಳೆಯಿಂದ ನಿರಂತರವಾಗಿ ಮಳೆ ಬೀಳುವ ಭರವಸೆಯಿತ್ತು. ಆದರೆ ಈ ಮಳೆಯಿಂದಾಗಿ ಬೆಳೆಗಳಿಗೆ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದ್ದು, ಎರಡು ದಿನಗಳಿಂದ ಮತ್ತೆ ತುಂತುರು ಮಳೆ ಸುರಿಯುತ್ತಿದೆ. ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲಾಗದೆ, ರೈತರಿಗೆ ಬೆಳೆ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಹಲವೆಡೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಮಳೆಯ ಕೊರತೆಯಿಂದಾಗಿ ಈ ರೋಗಬಾಧೆ ಕಾಣಿಸಿಕೊಂಡಿದೆ ಎಂದು ಕೃಷಿ ಇಲಾಖೆ‌ ಮಾಹಿತಿ‌ ನೀಡಿದೆ. ಈ ರೋಗಬಾಧೆಯಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಬೆಳೆಗಳು ಅಪಾಯದಲ್ಲಿದೆ. ಇದು ಮುಖ್ಯವಾಗಿ ಭತ್ತದ ಬೆಳೆಯ ಮೇಲೆ ಹೆಚ್ಚಿನ‌ ಪ್ರಮಾಣದಲ್ಲಿ ಪರಿಣಾಮ ಬೀರಿದೆ. ಇದರಿಂದ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ.

ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಉತ್ಪಾದನೆಯಾಗುತ್ತಿದ್ದು, ಸಾಂಪ್ರದಾಯಿಕ ಬೀಜಗಳ ಮೇಲೆ ಮಿಶ್ರತಳಿಗಳ ಬಳಕೆ ಇತ್ತೀಚೆಗೆ ಹೆಚ್ಚಿದ್ದು, ಇದು ರೋಗ ಹರಡುವಿಕೆಗೆ ಕಾರಣವಾಗುತ್ತಿದೆ. ಕೀಟಗಳನ್ನು ತಡೆಯಲು ರೈತರು ಕೀಟನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ಸಿಗದ ಕಾರಣ ಬೆಳೆ ನಷ್ಟವಾಗುವ ಭೀತಿ ಎದುರಾಗಿದೆ.

ಈ ವರ್ಷ ಮಳೆ ತಡವಾಗಿ ಕಾಣಿಸಿಕೊಂಡಿದ್ದರಿಂದ ನಾಟಿ ಕಾರ್ಯವೂ ತಡವಾಗಿ ಮುಕ್ತಾಯಗೊಂಡಿದೆ ಮತ್ತು ನಿಗದಿತ ಸಮಯದಲ್ಲಿ ಬೆಳೆಗಳಿಗೆ ಮಳೆ ನೀರಿನ ಅಭಾವ ಉಂಟಾಗಿ ಬೆಳೆಗಳ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಹೀಗಾಗಿ ಈ ವರ್ಷ ಕೊಯ್ಲು ತಡವಾಗಿ ಆರಂಭವಾಗುವ ಸಾಧ್ಯತೆಗಳಿವೆ.