ಹಳಿಯಾಳ ಪಟ್ಟಣದಲ್ಲಿ ಮುಂದುವರಿದ ಅತಿಕ್ರಮಿತ ಅಂಗಡಿಗಳ ತೆರವು ಕಾರ್ಯಾಚರಣೆ

ಹಳಿಯಾಳ : ಸಹಾಯಕ ಆಯುಕ್ತರ ಮತ್ತು ತಹಶೀಲ್ದಾರರ ಮಾರ್ಗದರ್ಶನದಲ್ಲಿ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ್ ಅವರ ನೇತೃತ್ವದಡಿ, ಪಿಎಸ್ಐ ವಿನೋದ್ ರೆಡ್ಡಿ ನೇತೃತ್ವದ ಪೊಲೀಸ್ ಇಲಾಖೆಯ ಸಂಪೂರ್ಣ ಸಹಕಾರದಲ್ಲಿ ಸೋಮವಾರ ಹಳಿಯಾಳ ಪಟ್ಟಣದ ವಿ.ಆರ್ ದೇಶಪಾಂಡೆ ರಸ್ತೆ, ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಅತಿಕ್ರಮಿತ ಅಂಗಡಿಗಳ ತೆರವು ಕಾರ್ಯಾಚರಣೆಯನ್ನು ಮಾಡಲಾಯಿತು.

ತೆರವಿಗೂ ಮುನ್ನ ಸಹಾಯಕ ಆಯುಕ್ತರ ಮತ್ತು ತಹಶೀಲ್ದಾರರ ಮಾರ್ಗದರ್ಶನದಂತೆ ಅತಿಕ್ರಮಿತ ಅಂಗಡಿದಾರರ ಮನವೊಲಿಸುವಲ್ಲಿ ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ್ ಯಶಸ್ವಿಯಾದರು. ಅದರಲ್ಲಿಯೂ ಮುಖ್ಯವಾಗಿ ರಸ್ತೆ ಬದಿಯಲ್ಲಿ ತರಕಾರಿ ಮಾರುತ್ತಿದ್ದ ವ್ಯಾಪಾರಸ್ಥರು ತೆರವು ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕರ್ತವ್ಯಪರತೆ ಮತ್ತು ಜನಸ್ನೇಹಿ ನಡವಳಿಕೆ ಅಧಿಕಾರಿಗಳಲ್ಲಿ ಇದ್ದಲ್ಲಿ ಏನಾಗಬಹುದು ಎನ್ನುವುದಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಳಿಯಾಳ ಪಟ್ಟಣದಲ್ಲಿ ಮಾಡಿದ ತೆರವು ಕಾರ್ಯಾಚರಣೆಯೇ ಸೂಕ್ತ ಉದಾಹರಣೆಯಾಗಿ ನಿಲ್ಲುತ್ತದೆ.