ನೆಲ್ಲಿಕೇರಿ ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮ ನರೆವೇರಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ಹನುಮಂತ ಸರಕಾರಿ ಪದವಿಪೂರ್ವ ಕಾಲೇಜು ನೆಲ್ಲಿಕೇರಿ ಮೈದಾನದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಅವರು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು “ಸರ್ಕಾರದಿಂದ ರಸ್ತೆ, ಸೇತುವೆ,
ಕಟ್ಟಡಗಳನ್ನು ನಿರ್ಮಾಣ ಮಾಡುವುದಷ್ಟೇ ಅಲ್ಲದೇ, ಸುತ್ತಮುತ್ತಲಿನ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಹೋಗುವುದೂ ಅತಿಮುಖ್ಯವಾಗಿದೆ. ಸಸ್ಯ ಸಂಕುಲ ಕ್ಷೀಣವಾದರೆ ಮಾನವ ಹಾಗೂ ಇತರೆಲ್ಲಾ ಜೀವಿಗಳು ಬದುಕಲು ಸಾಧ್ಯವಿಲ್ಲ. ಜಾಗತಿಕ ತಾಪಮಾನದ ಸಮತೋಲನಕ್ಕೆ ಅರಣ್ಯಗಳೇ ಮೂಲಾಧಾರ. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಅರಿವುಮೂಡಿಸುವ ಸದುದ್ದೇಶದಿಂದ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಗಿಡಗಳನ್ನು ನೆಡುವುದರ ಜೊತೆ ಅದರ ಪಾಲನೆ ಪೋಷಣೆಯೂ ಅತಿ ಮುಖ್ಯ..” ಎಂದು ಹೇಳಿದರು.

ಈ ಸಂದರ್ಭದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್, ಪ್ರಾಂಶುಪಾಲ ಸತೀಶ್ ಬಿ. ನಾಯ್ಕ, ಕುಮಟಾ ಸಾಮಾಜಿಕ ಅರಣ್ಯ ವಿಭಾಗದ ಉಪವಲಯ ಅರಣ್ಯಾಧಿಕಾರಿ ಸುದರ್ಶನ್ ಪಟಗಾರ, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ರಾಘವೇಂದ್ರ ಮಡಿವಾಳ, ಉಪನ್ಯಾಸಕರಾದ ಆರ್. ಎಚ್. ನಾಯ್ಕ, ಆರ್. ಟಿ. ನಾಯಕ, ಆನಂದ ನಾಯ್ಕ, ಎಸ್. ಎಮ್. ನಾಯ್ಕ, ನಾಗರಾಜ ನಾಯ್ಕ, ಗಣೇಶ ಭಟ್, ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.