ಹೊನ್ನಾವರ: ನಿವೃತ್ತ ಶಿಕ್ಷಕರು ಹಿರಿಯ ಯಕ್ಷಗಾನ ಕಲಾವಿದರೂ ಖ್ಯಾತ ಮೂರ್ತಿ ಕಲಾವಿದರೂ ಸಾಹಿತ್ಯ ಪ್ರೇಮಿಗಳೂ, ಸಾಮಾಜಿಕ ಕಳಕಳಿಯುಳ್ಳ ಬಿ.ವಿ ಭಂಡಾರಿ ನಿಧನ

ಹೊನ್ನಾವರ: ತಾಲೂಕಿನ ಕೆರೆಕೋಣನ ನಿವೃತ್ತ ಶಿಕ್ಷಕರು ಹಿರಿಯ ಯಕ್ಷಗಾನ ಕಲಾವಿದರೂ ಖ್ಯಾತ ಮೂರ್ತಿ ಕಲಾವಿದರೂ ಸಾಹಿತ್ಯ ಪ್ರೇಮಿಗಳೂ, ಸಾಮಾಜಿಕ ಕಳಕಳಿಯುಳ್ಳ ಬಿ.ವಿ ಭಂಡಾರಿ ಕೆರೆಕೋಣ (85 ವರ್ಷ) ಹೃದಯದ ಕಾಯಿಲೆಯಿಂದಾಗಿ ಚಿಕಿತ್ಸೆ ಫಲಿಸದೇ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಿವೃತ್ತಿಯ ಅಂಚಿನಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲೀಷ್ ನಲ್ಲಿ ಬಿ ಎಡ್ ಪದವಿ ಪಡೆದಿದ್ದರು‌. ತೊಳಸಾಣಿಯಂತಹ ಕಾಡಿನಲ್ಲಿರುವ ಗಿರಿಜನ ಮರಾಠಿ ಸಮಾಜದ ಮಕ್ಕಳಿಗೆ ಪಾಠ ಹೇಳಲು ಹಲವು ವರ್ಷಗಳಿಂದ ತಪ್ಪದೇ ನಿತ್ಯವೂ ಹತ್ತಾರು ಕಿಮೀ ನಡೆದುಕೊಂಡು ಹೋಗುತ್ತಿದ್ದ ನಿಷ್ಠಾವಂತ ಶಿಕ್ಷಕರಾಗಿದ್ದರು . ಉತ್ತಮ ಚಿತ್ರಕಾರರು, ಮೂರ್ತಿ ಶಿಲ್ಪಿಗಳು, ಮೃದಂಗ ವಾದಕರು ಆಗಿದ್ದ ಇವರಿಗೆ ಸಾಹಿತ್ಯದಲ್ಲಿ,ಸಂಗೀತ,ಯಕ್ಷಗಾನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಜೀವನದಲ್ಲಿ ಆದರ್ಶ ವ್ಯಕ್ತಿಗಳಾಗಿ ಬಾಳಿದ ಅವರು ತಮ್ಮ ದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡುವಂತೆ ಈ ಹಿಂದೆಯೆ ನಿರ್ಧರಿಸಿದಂತೆ ಕುಟುಂಬದವರು ದಾನ ಮಾಡಿದ್ದಾರೆ.
ದಿವಂಗತರು ಹೆಂಡತಿ ಸರಸ ಭಂಡಾರಿ, ಮಕ್ಕಳಾದ ಜನ ಶಿಕ್ಷಣ ಸಂಸ್ಥಾನದ ಹಿರಿಯ ಅಧಿಕಾರಿ ರಮೇಶ ಭಂಡಾರಿ, ಕಲಾವಿದ ಹರೀಶ ಭಂಡಾರಿ ಮಹೇಶ್ ಭಂಡಾರಿ ಅಪಾರ ಬಂಧು ಬಳಗ ಹಾಗೂ ಹಿತೈಷಿಗಳು, ಸ್ನೇಹಿತರನ್ನು, ಶಿಷ್ಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.