ದಾಂಡೇಲಿ: ಸೋಮಾನಿ ವೃತ್ತದ ಹತ್ತಿರ ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿ : ಹೆಲ್ಮೆಟ್ ಮೂಲಕ ಹಲ್ಲೆ

ದಾಂಡೇಲಿ : ನಗರದ ಸೋಮಾನಿ ವೃತ್ತದ ಹತ್ತಿರ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ, ಅದರಲ್ಲಿ ಒಂದು ದ್ವಿಚಕ್ರ ವಾಹನದ ಸವಾರ ಡಿಕ್ಕಿಗೊಳಗಾದ ಇನ್ನೊಂದು ದ್ವಿಚಕ್ರ ವಾಹನದ ಸವಾರನಿಗೆ ಹೆಲ್ಮೆಟ್ನಲ್ಲಿ ಹಲ್ಲೆಗೊಳಿಸಿ, ಅಪಘಾತಕ್ಕಿಂತ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ವ್ಯಕ್ತಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾದ ಘಟನೆ ನಡೆದಿದೆ.

ನಗರದ ಭಟ್ ಆಸ್ಪತ್ರೆ ಕಡೆಯಿಂದ ಬರುತ್ತಿದ್ದ ಕೆಎ:31, ಆರ್:6491 ಸಂಖ್ಯೆಯ ಸ್ಥಳೀಯ 14ನೇ ಬ್ಲಾಕ್ ನಿವಾಸಿ ಸದಾನಂದ.ಎಸ್.ಇಟಗಿಯವರ ದ್ವಿಚಕ್ರ ವಾಹನ ಮತ್ತು ಬಾಂಬೂಗೇಟ್ ಕಡೆಯಿಂದ ಬರುತ್ತಿದ್ದ ಕೆಎ:22 ಇಬಿ: 8667 ಸಂಖ್ಯೆಯ 14ನೇ ಬ್ಲಾಕಿನ ನಿವಾಸಿ ಬಸವಂತ ಶಂಕರ್ ಪಾಟೀಲ್ ಎಂಬವರ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಬಸವಂತ ಶಂಕರ್ ಪಾಟೀಲ್ ಅವರ ದ್ವಿಚಕ್ರ ವಾಹನದಲ್ಲಿದ್ದ ಅವರ ಪತ್ನಿ ಸುವರ್ಣಾ ಪಾಟೀಲ್ ಅವರು ಬಿದ್ದು, ಅವರಿಗೆ ಗಾಯವಾಗಿದೆ. ಪತ್ನಿಗೆ ಗಾಯವಾಗಿರುವುದರಿಂದ ಆಕ್ರೋಶಿತರಾದ ಬಸವಂತ ಪಾಟೀಲ್ ಅವರು ಇನ್ನೊಂದು ದ್ವಿಚಕ್ರ ವಾಹನದ ಸವಾರ ಸದಾನಂದ.ಎಸ್.ಇಟಗಿಯವರ ಮೇಲೆ ಏಕಾಏಕಿ ತನ್ನ ಹೆಲ್ಮೆಟಿನಿಂದ ತಲೆಗೆ ಹೊಡೆದಿದ್ದಾರೆ. ಈ ಸಮಯದಲ್ಲಿ ಹೆಲ್ಮೆಟಿನ ಬಲವಾದ ಹೊಡೆತಕ್ಕೆ ಸದಾನಂದ.ಎಸ್.ಇಟಗಿಯವರ ತಲೆಗೆ ಗಂಭೀರ ಗಾಯವಾಗಿದೆ.

ಅಷ್ಟೋತ್ತಿಗಾಗುವಾಗಲೆ ಸ್ಥಳೀಯರು ಹಲ್ಲೆಯಿಂದ ಗಂಭೀರ ಗಾಯಗೊಂಡ ಸದಾನಂದ.ಎಸ್.ಇಟಗಿಯವರನ್ನು ತಕ್ಷಣವೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಗಂಭೀರ ಗಾಯವಾಗಿದ್ದ ಸದಾನಂದ.ಎಸ್.ಇಟಗಿಯವರ ಗಾಯವಾಗಿದ್ದ ತಲೆಗೆ ಔಷಧಿಯನ್ನು ಹಚ್ಚಿ ಐದಾರು ಹೊಲಿಗೆ ಹಾಕಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕಳುಹಿಸಿಕೊಡಲಾಗಿದೆ. ಇನ್ನೂ ಬಸವಂತ ಪಾಟೀಲ್ ಅವರ ಪತ್ನಿ ಸುವರ್ಣಾ ಪಾಟೀಲ್ ಅವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ.

ಅಪಘಾತ ನಡೆದ ನಂತರ ಸೋಮಾನಿ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರ ಎದುರಿಗೆ ಬಸವಂತ ಶಂಕರ ಪಾಟೀಲ್ ಅವರು ಹಲ್ಲೆ ಮಾಡಿರುವುದರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ಥಳಕ್ಕೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.