ಮುಸ್ಲಿಂ ಯುವತಿಯೊಂದಿಗೆ ಆಟೋದಲ್ಲಿ ತೆರಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮುಸ್ಲಿಂಯುವತಿಯೊಂದಿಗೆ ಆಟೋದಲ್ಲಿ ಹೊರಟಿದ್ದ ಯುವಕನ ಮೇಲೆ ಅನ್ಯಕೋಮಿನ ಗುಂಪೊಂದು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಖಂಜರ್ ಗಲ್ಲಿಯಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮಲ್ಲಾಪುರ ಪಿ.ಜಿ ಗ್ರಾಮದ ಜ್ಞಾನೇಶ್ವರ ಎಂಬ ಯುವಕನ ಮೇಲೆ ಅನ್ಯಕೋಮಿನ ಕೆಲ ಯುವಕರು ಹಲ್ಲೆ ನಡೆಸಿದ್ದಾರೆ. ಪೊಲೀಸರ ಎದುರೇ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಯುವಕರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬೆಳಗಾವಿಯ ಖಡೇಬಜಾರ್‌ನಲ್ಲಿ ಘಟನೆ ನಡೆದಿದ್ದು, ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ ಜ್ಞಾನೇಶ್ವರ ಚಪ್ಪಲಿ ವ್ಯಾಪಾರಿ ಆಗಿದ್ದು, ತನ್ನೂರಿನ ಪರಿಚಯಸ್ಥ ಅನ್ಯಕೋಮಿನ ಯುವತಿಯ ಜೊತೆಗೆ ಬೆಳಗಾವಿ ಬಸ್ ನಿಲ್ದಾಣದಿಂದ ಖಡೇಬಜಾರ್ ಕಡೆಗೆ ಆಟೋದಲ್ಲಿ ತೆರಳುತ್ತಿದ್ದ. ಇದನ್ನು ಗಮನಿಸಿ ಆಟೋ ಹಿಂಬಾಲಿಸಿದ 10ಕ್ಕೂ ಅಧಿಕ ಯುವಕರು, ಅವರಿಬ್ಬರು ಖಡೇಬಜಾರ್‌ಗೆ ಬರುತ್ತಿದ್ದಂತೆ ರಿಕ್ಷಾವನ್ನು ತಡೆದು ನಿಲ್ಲಿಸಿ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.ಬಳಿಕ ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಯುವಕರಿಂದ ಗೂಂಡಾಗಿರಿ ಪ್ರದರ್ಶನ ಮಾಡಲಾಗಿದೆ. ಹಿಂದೂ ಯುವಕನ ಮೇಲೆ ಹಲ್ಲೆಗೈಯುತ್ತಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ ಕೆಲವು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.