ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ ಗರ್ಭಿಣಿಯರಾದ 45 ಸಾವಿರಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರು: ಆತಂಕ ಸೃಷ್ಟಿಸಿದ ವರದಿ

ಮೈಸೂರು, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಹದಿಹರೆಯ ಹೆಣ್ಣುಮಕ್ಕಳಲ್ಲಿ(Teen Pregnancies) ಗರ್ಭಧಾರಣೆಯ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಜನವರಿ 2020 ರಿಂದ ಜೂನ್ 2023 ರವರೆಗೆ 45,000 ಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳು ಗರ್ಭಧಾರಣೆ ಮಾಡಿದ್ದಾರೆ. RTI ಮೂಲಕ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ಪಡೆದ ಮಾಹಿತಿಯ ಪ್ರಕಾರ, 2020ರಲ್ಲಿ 10,101 ಇತ್ತು. ಬಳಿಕ 2021 ರ ವೇಳೆಗೆ 13,159 ಕ್ಕೆ ಹದಿಹರೆಯದ ಗರ್ಭಧಾರಣೆಯ ಸಂಖ್ಯೆಯು ಏರಿಕೆಯಾಗಿದೆ.

ಜನವರಿ ಮತ್ತು ಜೂನ್ 2023 ರ ನಡುವೆ, ರಾಜ್ಯದಲ್ಲಿ ಇನ್ನೂ 2,736 ಹದಿಹರೆಯದ ಗರ್ಭಧಾರಣೆಗಳು ವರದಿಯಾಗಿವೆ. ಜನವರಿ 2020 ಮತ್ತು ಜೂನ್ 2023 ರ ನಡುವೆ ಕರ್ನಾಟಕದಲ್ಲಿ ವರದಿಯಾದ ಒಟ್ಟು ಹದಿಹರೆಯದ ಗರ್ಭಧಾರಣೆಯ ಸಂಖ್ಯೆ 45,557. ಈ ಮಾಹಿತಿಯನ್ನು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಲೈಂಗಿಕ ರಕ್ಷಣೆ ಮತ್ತು ಪುನರ್ವಸತಿಯಲ್ಲಿ ತೊಡಗಿರುವ ಒಡನಾಡಿ ಸೇವಾ ಸಂಸ್ಥೆ ಎಂಬ ಎನ್‌ಜಿಒ ಸಹ-ಸಂಸ್ಥಾಪಕ ಎಲ್.ಪರಶುರಾಮ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

RCH ಪೋರ್ಟಲ್‌ನಲ್ಲಿ ಅಂಕಿಅಂಶಗಳನ್ನು ವರದಿ ಮಾಡಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಹದಿಹರೆಯದ ಗರ್ಭಧಾರಣೆಯು ದ್ವಿಗುಣಗೊಳ್ಳುತ್ತಿದೆ. ಇದು ಅಂಕಿಅಂಶಗಳಲ್ಲೇ ಬಹಿರಂಗವಾಗುತ್ತಿದೆ. ಆದ್ರೆ ಏಕೆ ಹದಿಹರೆಯದ ಗರ್ಭಧಾರಣೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ? ಗರ್ಭಧಾರಣೆ ಮಾಡುವ ಹದಿಹರೆಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ತಾಯಿ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಎದುರಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಗರ್ಭಧಾರಣೆಯಿಂದಾಗಿ ಅವರ ಜೀವಕ್ಕೂ ಅಪಾಯ ಇದೆ. ಇಷ್ಟೆಲ್ಲಾ ಇದ್ದರೂ ರಾಜ್ಯ ಶಾಸಕಾಂಗದಲ್ಲಿ ಇಂತಹ ಗಂಭೀರ ಸಮಸ್ಯೆಗಳನ್ನು ಏಕೆ ಪ್ರಸ್ತಾಪಿಸುತ್ತಿಲ್ಲ. ಈ ಬಗ್ಗೆ ಏಕೆ ಚರ್ಚೆಗಳಾಗುತ್ತಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತಿದೆ ಎಂದು ಎಲ್.ಪರಶುರಾಮ್ ಆತಂಕ ಹೊರ ಹಾಕಿದರು.

ಅಪ್ರಾಪ್ತ ತಾಯಂದಿರಿಗೆ ಕುಟುಂಬದ ಸಲಹೆ ಮತ್ತು ಮಗುವಿನ ಆರೈಕೆಯಲ್ಲಿ ಮಾರ್ಗದರ್ಶನದ ಅಗತ್ಯವಿರುತ್ತದೆ, ಆದರೆ ಅವರನ್ನು ಮುಖ್ಯವಾಹಿನಿಗೆ ತರಲು ಆಗುವುದಿಲ್ಲ. ಹದಿಹರೆಯದ ಗರ್ಭಧಾರಣೆಯಿಂದ ಉಂಟಾಗುವ ಈ ಅಂಶಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕಾಗಿದೆ. ಲೈಂಗಿಕ ದೌರ್ಜನ್ಯ ಸಂತ್ರಸ್ತರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ದತ್ತಾಂಶವು ಕಳೆದ ಮೂರು ವರ್ಷಗಳಲ್ಲಿ(2020ರಿಂದ 2023) ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಒಟ್ಟು 584 ಅಪ್ರಾಪ್ತ ಸಂತ್ರಸ್ತರಿಗೆ ಪರಿಹಾರ ನೀಡಿದೆ ಎಂದು ದಾಖಲಿಸಿದೆ. ಒಡನಾಡಿಯಿಂದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ ಕೆಎಸ್‌ಎಲ್‌ಎಸ್‌ಎ, 2020-21ರಲ್ಲಿ ಕಲಬುರ್ಗಿ ಜಿಲ್ಲೆಯೊಂದರಲ್ಲೇ 45 ಮಂದಿ ಸೇರಿದಂತೆ ರಾಜ್ಯದ 219 ಅಪ್ರಾಪ್ತ ಸಂತ್ರಸ್ತರಿಗೆ ₹ 5.84 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದೆ.

2021-22ರಲ್ಲಿ ರಾಮನಗರ ಜಿಲ್ಲೆಯಲ್ಲಿ 23 ಅಪ್ರಾಪ್ತ ಸಂತ್ರಸ್ತರಿಗೆ ಮತ್ತು ಕಲ್ಬುರ್ಗಿ ಜಿಲ್ಲೆಯ 21 ಸೇರಿದಂತೆ 187 ಸಂತ್ರಸ್ತರಿಗೆ ₹ 5.29 ಕೋಟಿ ಪರಿಹಾರವನ್ನು ಪಾವತಿಸಲಾಗಿದೆ. 2022-2023ರ ಸಾಲಿನಲ್ಲಿ ಮೈಸೂರು, ದಕ್ಷಿಣ ಕನ್ನಡ ಮತ್ತು ಕೋಲಾರ ಜಿಲ್ಲೆಗಳಿಂದ 178 ಸಂತ್ರಸ್ತರಿಗೆ ₹6.68 ಕೋಟಿ ಪರಿಹಾರವನ್ನು ನೀಡಲಾಗಿದೆ. ಇನ್ನು ಈ ದತ್ತಾಂಶವನ್ನು ಹಂಚಿಕೊಳ್ಳುವ ಮೂಲಕ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯರಾಗಿರುವ ಪರಶುರಾಮ್, ರಾಜ್ಯದಲ್ಲಿ ಅಪ್ರಾಪ್ತ ವಯಸ್ಕರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.