ಕುಮಟಾ :ಸಂಸ್ಕಾರವೇ ಸಂಸ್ಕೃತಿಯ ಆಧಾರ – ಡಾ. ಮಹೇಶ್ ಅಡ್ಕೊಳ್ಳಿ

ಕುಮಟಾ : “ನಮ್ಮ ವೇದಗಳಲ್ಲಾಗಲೀ, ಪುರಾಣಗಳಲ್ಲಾಗಲಿ, ‘ಸಂಸ್ಕೃತಿ’ ಎಂಬ ಪದ ಇಲ್ಲ.ಅಲ್ಲಿ ಸಂಸ್ಕಾರ ಎಂಬ ಪದ ಬಳಕೆಯಲ್ಲಿರುವುದನ್ನು ನಾವು ಕಾಣಬಹುದು. ಸಂಸ್ಕೃತಿ ಎನ್ನುವ ಪದವನ್ನು ಇತ್ತೀಚೆಗೆ ಬಳಸಲಾಗುತ್ತಿದೆ. ಇಲ್ಲಿ ಸಂಸ್ಕೃತಿ ಎಂಬುದು ಬೇರೇನೂ ಅಲ್ಲ, ಸಂಸ್ಕಾರವೇ ಸಂಸ್ಕೃತಿ. ಸಂಸ್ಕಾರವೇ ಸಂಸ್ಕೃತಿಯ ಆಧಾರ..” ಎಂದು ಡಾ.ಮಹೇಶ್ ಅಡ್ಕೊಳ್ಳಿ ಹೇಳಿದರು. ಅವರು ಇಂದು ಕುಮಟಾದ ಮಾಧವಕುಂಜ ಸಭಾಭವನದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ (ರಿ) ಕಾರವಾರ ಇವರ ವತಿಯಿಂದ ನಡೆದ ‘ಮಾಸದ ಬೆಳಕು’ ಕಾರ್ಯಕ್ರಮದಲ್ಲಿ ಉಪನ್ಯಾಸ ಮಾಡುತ್ತಾ ಮಾತನಾಡಿದರು. ಅವರು ಇಂದು ಡಿ.ವಿ.ಜಿಯವರ “ಸಂಸ್ಕೃತಿ” ಹಾಗೂ “ಋತ ಸತ್ಯ-ಧರ್ಮ” ಎಂಬ ಪುಸ್ತಕದ ಕುರಿತು ಉಪನ್ಯಾಸ ಮಾಡಿದರು..
ನಂತರ ಅಧ್ಯಕ್ಷತೆ ವಹಿಸಿದ್ದ, ಡಾ.ಎ.ವಿ.ಬಾಳಿಗಾ ಕಾಲೇಜಿನ ನಿವೃತ್ತ ಇಂಗ್ಲೀಷ್ ಉಪನ್ಯಾಸಕರು ಹಾಗೂ ಅಖಿಲ ಭಾರತ ಸಾಹಿತ್ಯ ಪರಿಷತ್ ನ ಮಾರ್ಗದರ್ಶಿಗಳು ಆದ ಶ್ರೀ ಟಿ.ಜಿ.ಭಟ್ ಮಾತನಾಡಿ, “ತಿಂಗಳಿಗೊಂದು ಇಂತಹ ಕಾರ್ಯಕ್ರಮ ಮಾಡುವುದು ನಮ್ಮ ಉದ್ದೇಶ. ಇದರಿಂದ ಜ್ಞಾನದ ಜೊತೆ, ನಮ್ಮ ಭಾರತದ ಸಾಹಿತ್ಯ ಪರಂಪರೆಯ ಪರಿಚಯವೂ ಎಲ್ಲರಿಗೂ ಆದ ಹಾಗಾಗುತ್ತದೆ. ಇದರೊಂದಿಗೆ ಉತ್ತಮ ವಾಗ್ಮಿಗಳಿಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದಕ್ಕಾಗಿ ನಿಮ್ಮೆಲ್ಲರ ಸಹಕಾರ ಮುಖ್ಯ” ಎಂದು ಹೇಳಿದರು..

ಸಾಹಿತ್ಯ ಪರಿಷತ್ತಿನ ಸಹ ಕಾರ್ಯದರ್ಶಿ ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಗಣೇಶ್ ಭಟ್ ವಂದಿಸಿದರು.