ಡಿಕೆ ಶಿವಕುಮಾರ್​ ಭೇಟಿಯಾದ ಬಿಜೆಪಿ ನಾಯಕರು: ಬುರ್ಖಾ ಹಾಕಿಕೊಂಡು ಹಿಂಬಾಗಿಲಿನಿಂದ ಹೋಗಿದ್ರಾ ಎಂದ ಮುನಿರತ್ನ

ಬೆಂಗಳೂರು: ರಾಜ್ಯದಲ್ಲಿ ಆಪರೇಷನ್​ ಹಸ್ತ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರಿದ್ದ ನಾಯಕರು ಈಗ ಬಿಜೆಪಿ ತೊರೆದು ಕಾಂಗ್ರೆಸ್​​ಸೇರುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಇತ್ತೀಚೆಗೆ ಬಿಜೆಪಿಯ ಕೆಲ ಶಾಸಕರು ಪ್ರತ್ಯೇಕವಾಗಿ ಉಪಮುಖ್ಯಮಂತ್ರಿ  DK Shivakumar ​ಅವರನ್ನು ಭೇಟಿಯಾಗಿದ್ದರು. ಅಲ್ಲದೇ ಮಾಜಿ ಸಚಿವ ಎಸ್​ಟಿ ಸೋಮಶೇಖರ್ ಡಿಸಿಎಂ ಡಿಕೆ ಶಿವಕುಮಾರ್​ ನನ್ನ ರಾಜಕೀಯ ಗುರು ಅಂತ ಹಾಡಿ ಹೊಗಳಿದ್ದರು. ಅಲ್ಲದೇ ಬಿಜೆಪಿಯ ನಾಲ್ಕೈದು ನಾಯಕರು ಕಾಂಗ್ರೆಸ್​ಗೆ ಸೇರುವುದು ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಂಬಂಧ ಬಿಜೆಪಿ ಶಾಸಕ ಮುನಿರತ್ನ ಮಾತನಾಡಿ ಯಾರಾದರೂ ಅವರ (ಡಿಕೆ ಶಿವಕುಮಾರ್​) ಮನೆಗೆ ಹಿಂಬಾಗಿಲಿನಿಂದ ಹೋಗಿದ್ದಾರಾ? ಬುರ್ಖಾ ಹಾಕಿಕೊಂಡು ಹೋಗಿದ್ದಾರಾ ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು 17 ಜನರಲ್ಲಿ ಯಾರು ಹೋಗುತ್ತಾರೆ ಗೊತ್ತಿಲ್ಲ. ನಾನಂತೂ ಬಿಜೆಪಿ ಬಿಟ್ಟು ಹೋಗಲ್ಲ. ಬೇಕಾದರೆ ರಾಜಕೀಯ ನಿವೃತ್ತಿ ಆಗುತ್ತೇನೆ. ಕಾಂಗ್ರೆಸ್​ಗೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಅಧಿಕಾರಕ್ಕಾಗಿ ನಾನು ಪಕ್ಷ ಬಿಟ್ಟು ಹೋಗಲ್ಲ. ನನ್ನ ಮುಂದಿನ ಜೀವನದ ಆಧಾರ ಬಿಜೆಪಿ ಚಿಹ್ನೆ. ಬಿಜೆಪಿ ಬಗ್ಗೆ ನಂಬಿಕೆ, ಗೌರವ ಇದೆ. ಬಿಜೆಪಿಯಲ್ಲಿ ನನ್ನನ್ನು ಬಹಳ ಗೌರವಯುತವಾಗಿ ನೋಡಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಗೌರವದಿಂದ ಮಾತಾಡಿಸುತ್ತಾರೆ ಎಂದು ಹೇಳಿದರು.

ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್

ಡಿಕೆ ಶಿವಕುಮಾರ್​ ನನ್ನ ರಾಜಕೀಯ ಗುರು ಎಂಬ ಎಸ್​ಟಿ ಸೋಮಶೇಖರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅದು ಅವರ ವೈಯಕ್ತಿಕ ಅಭಿಪ್ರಾಯ, ನಾನು ಡಿಕೆ ಸುರೇಶ್​ 40 ವರ್ಷದಿಂದ ಸ್ನೇಹಿತರು. ನನ್ನ ಜೀವನದ ಗುರು ಹಾಗೂ ರಾಜಕೀಯ ಗುರು ಬಿ.ಕೆ.ಹರಿಪ್ರಸಾದ್. ಅದು ರಾಜಕೀಯ ಕಾರಣಕ್ಕೆ ಅಲ್ಲ, ಅದು ನಮ್ಮ ಊರಿನ ಸಂಬಂಧ. ವೈಯಕ್ತಿಕವಾಗಿ ಡಿಕೆ ಸುರೇಶ್, ಡಿಕೆ ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಜತೆ ದ್ವೇಷವಿಲ್ಲ ಎಂದರು.

ಇನ್ನು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಡಿ.ಕೆ. ಶಿವಕುಮಾರ್ ಬೆಂಗಳೂರಿನ ಸಚಿವರು. ಅವರ ಜೊತೆ ಯಾವುದೇ ರಾಜಕೀಯ ಸಂಬಂಧ ಉಳಿಸಿಕೊಂಡಿಲ್ಲ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಉತ್ತರ ಕೊಡುತ್ತಾರಾ ಅಥವಾ ಬೆಂಗಳೂರಿನ ಸಚಿವರಾಗಿ ಉತ್ತರ ಕೊಡುತ್ತಾರಾ ನನಗೆ ಗೊಂದಲ ಆಗುತ್ತಿದೆ. ಮೊದಲು ಅವರು ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಎಲ್ಲರನ್ನೂ ಕರೆದು ಸಭೆ ಮಾಡಲಿ ಎಂದು ಸಲಹೆ ನೀಡಿದರು.

ನಾನು ಜೈಲಿಗೆ ಹೋಗಲು ಸಿದ್ಧ

ಆರ್. ಆರ್. ನಗರದಲ್ಲಿ ತನಿಖೆ ಅಂತಾದರೆ ಅದು 28 ಕ್ಷೇತ್ರಗಳಿಗೂ ಅನ್ವಯಿಸಬೇಕು. ಅಧಿಕಾರಿಗಳು ತಿರುಚಿ ಬರೆದರೆ ಆ ದಾಖಲೆಗಳು ಮೇಲೆ ದೊಡ್ಡ ತನಿಖಾ ಸಂಸ್ಥೆಗಳಿಗೆ ಹೋಗುತ್ತದೆ. ಅಧಿಕಾರಿಗಳು ಎಚ್ಚರಿಕೆಯಿಂದ ತನಿಖೆ ಮಾಡಬೇಕು. ಅವರು ಸ್ಥಳಕ್ಕೆ ಹೋಗಿ ಸಮಗ್ರ ತನಿಖೆ ಮಾಡಿದರೆ ಅವರಿಗೆ ಒಳ್ಳೆಯದು. ಇಲ್ಲದಿದ್ದರೆ ಅದೇ ಅವರಿಗೆ ಮುಳುವಾಗುತ್ತದೆ. ನನ್ನ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಅಂದರೆ ನಾನು ಜೈಲಿಗೆ ಹೋಗಲು ಸಿದ್ಧ. ನನಗೆ ಆರ್​.ಆರ್​.ನಗರ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಡಿ.ಕೆ.ಶಿವಕುಮಾರ್​ ನನ್ನನ್ನು ಬೇಕಾದರೆ ಜೈಲಿಗೆ ಕಳಿಸಲಿ. ನನ್ನನ್ನು ಜೈಲಿನಲ್ಲಿ ಇಟ್ಟು ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ ಎಂದು ಹೇಳಿದ್ದಾರೆ.