”ಕೆಜಿಎಫ್’, ‘ಪುಷ್ಪ’ ಸಿನಿಮಾಕ್ಕಿಂತಲೂ ನಮ್ಮ ಸಿನಿಮಾ ಹೆಚ್ಚು ಕನೆಕ್ಟ್ ಆಗುತ್ತೆ’: ಕಾರಣ ಕೊಟ್ಟ ವಿಜಯ್ ದೇವರಕೊಂಡ

 ವಿಜಯ್ ದೇವರಕೊಂಡ ನಟನೆಯ ಒಂದು  ಸಿನಿಮಾ ಈಗಾಗಲೇ ಮಕಾಡೆ ಮಲಗಿದೆ ಅದುವೇ ‘ಲೈಗರ್’. ಆ ಸಿನಿಮಾದ ಸೋಲಿನಿಂದ ಹೊರಬರಲು ವಿಜಯ್​ಗೆ ಇನ್ನಷ್ಟು ಸಮಯ ಬೇಕಾಗಬಹುದು ಅಷ್ಟು ಧಾರುಣವಾಗಿ ಆ ಸಿನಿಮಾ ನೆಲಕಚ್ಚಿತು. ಇದೀಗ ವಿಜಯ್ ದೇವರಕೊಂಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದೊಟ್ಟಿಗೆ ಪ್ರೇಕ್ಷಕರ ಮುಂದೆ ಬರಲು ತಯಾರಾಗಿದ್ದಾರೆ. ಆದರೆ ಇದು ಮಾಸ್ ಸಿನಿಮಾ ಅಲ್ಲ ಬದಲಿಗೆ ಅಪ್ಪಟ ಲವ್ ಸ್ಟೋರಿ ಹಾಗೂ ಕೌಟುಂಬಿಕ ಕತೆಯುಳ್ಳ ಸಿನಿಮಾ. ಮಾಸ್ ಅಲ್ಲದಿದ್ದರೂ ತಮ್ಮ ಸಿನಿಮಾ ಹಿಟ್ ಆಗುತ್ತದೆ ಎಂಬುದಕ್ಕೆ ವಿಜಯ್ ದೇವರಕೊಂಡ ಕೆಲವು ಕಾರಣಗಳನ್ನು ನೀಡಿದ್ದಾರೆ.

‘ಖುಷಿ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆ (ಆಗಸ್ಟ್ 09) ಹೈದರಾಬಾದ್​ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಿದರು. ಸಾಮಾನ್ಯವಾಗಿ ‘ಪುಷ್ಪ’, ‘ಕೆಜಿಎಫ್’ ರೀತಿಯ ಮಾಸ್ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಸಿನಿಮಾಗಳನ್ನಾಗಿ ಮಾಡಲಾಗುತ್ತದೆ, ಆದರೆ ನೀವೇನು ಲವ್ ಸ್ಟೋರಿ ಅದರಲ್ಲಿಯೂ ಮದುವೆ-ಜಗಳ, ವಿರಸಗಳಂಥಹಾ ವಿಷಯಗಳುಳ್ಳ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದೀರಲ್ಲ? ಎಂಬ ಪ್ರಶ್ನೆ ವಿಜಯ್ ದೇವರಕೊಂಡಗೆ ಎದುರಾಯ್ತು.

ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ‘ಪುಷ್ಪ’, ‘ಕೆಜಿಎಫ್’ ಅಂಥಹಾ ಪ್ಯಾನ್ ಸಿನಿಮಾಗಳನ್ನು ಒಬ್ಬ ಅಭಿಮಾನಿಯಾಗಿ, ಪ್ರೇಕ್ಷಕನಾಗಿ ನೋಡಿ ಖುಷಿ ಪಡುತ್ತಾರೆ. ಆದರೆ ಆ ರೀತಿಯ ಸಿನಿಮಾಗಳನ್ನು ನೋಡುವ ವ್ಯಕ್ತಿಗೆ ಗೊತ್ತಿರುತ್ತದೆ ನಿಜಜೀವನದಲ್ಲಿ ನಾವು ಪುಷ್ಪ ಅಲ್ಲವೆಂದು ಅಥವಾ ರಾಕಿಭಾಯ್ ಅಲ್ಲವೆಂದು, ಅಲ್ಲಿ ನಡೆಯುತ್ತಿರುವ ಕತೆ ನಮ್ಮ ಜೀವನದಲ್ಲಿ ನಡೆಯಲು ಸಾಧ್ಯವಿಲ್ಲವೆಂದು. ಆದರೆ ನಮ್ಮ ‘ಖುಷಿ’ ಸಿನಿಮಾ ಹಾಗಲ್ಲ, ಕನೆಕ್ಟಿವಿಟಿ ವಿಚಾರ ಬಂದರೆ ಎಲ್ಲರೂ ಕನೆಕ್ಟ್ ಆಗಬಹುದಾದ ಪಾತ್ರ, ಸನ್ನಿವೇಶಗಳೇ ನಮ್ಮ ಸಿನಿಮಾದಲ್ಲಿವೆ” ಎಂದಿದ್ದಾರೆ.

”ನಮ್ಮ ಸಿನಿಮಾದ ನಾಯಕ ವಿಪ್ಲವ್ ಒಬ್ಬ ಸಾಮಾನ್ಯ ವ್ಯಕ್ತಿ ಆತ ಯಾರು ಬೇಕಾದರೂ ಆಗಿರಬಹುದು, ಆರಾಧ್ಯ ಯಾರ ಗರ್ಲ್​ಫ್ರೆಂಡ್ ಅಥವಾ ಪತ್ನಿ ಆಗಿರಬಹುದು, ‘ಖುಷಿ’ ಸಿನಿಮಾದ ರೀತಿಯ ಕತೆ ಎಲ್ಲರ ಜೀವನದಲ್ಲಿಯೂ ನಡೆದಿರಬಹುದು, ನಮ್ಮ ಸಿನಿಮಾ ನೋಡುವವರು ಇದು ನಮ್ಮದೇ ಕತೆ, ನಾವೇ ಸಿನಿಮಾದ ಪಾತ್ರಗಳು ಎಂದುಕೊಳ್ಳಬಹುದು. ಹೆಚ್ಚು ಕನೆಕ್ಟಿವಿಟಿಗೆ ಅವಕಾಶ ಇರುವ ಕಾರಣ ಎಲ್ಲ ರಾಜ್ಯದ ಜನರು ಸಿನಿಮಾಕ್ಕೆ ಕನೆಕ್ಟ್ ಆಗುವ ವಿಶ್ವಾಸವಿದೆ” ಎಂದಿದ್ದಾರೆ ವಿಜಯ್.

‘ಖುಷಿ’ ಸಿನಿಮಾವು ಸೆಪ್ಟೆಂಬರ್ 1 ರಂದು ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ವಿಜಯ್ ದೇವರಕೊಂಡ, ಸಮಂತಾ, ವೆನ್ನೆಲ ಕಿಶೋರ್, ಜಯರಾಂ, ರಾಹುಲ್ ರಾಮಕೃಷ್ಣ, ಸಚಿನ್ ಖೇಡ್ಕರ್, ಮುರಳಿ ಶರ್ಮಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಆಗಸ್ಟ್ 9ರಂದು ಬಿಡುಗಡೆ ಆಗಿದ್ದು ವೈರಲ್ ಆಗಿದೆ.