ಆಗಸ್ಟ್​ 8ರಂದು ಭಾರತಕ್ಕೆ ರವಾನೆ ಆಗಲಿದೆ ಸ್ಪಂದನಾ ಮೃತದೇಹ; ಯಾವಾಗ ಅಂತ್ಯಕ್ರಿಯೆ?

ಸ್ಯಾಂಡಲ್​ವುಡ್​ ನಟ ವಿಜಯ್​ ರಾಘವೇಂದ್ರ ಅವರ ಮಡದಿ ಸ್ಪಂದನಾ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಕುಟುಂಬದವರ ಜೊತೆ ಬ್ಯಾಂಕಾಕ್​ ತೆರಳಿದ್ದ ಸ್ಪಂದನಾಗೆ ಆ.6ರಂದು ಹೃದಯಾಘಾತ ಸಂಭವಿಸಿತು. ಅವರ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಮಂಗಳವಾರ ಸಂಜೆ ವೇಳೆಗೆ ಪಾರ್ಥಿವ ಶರೀರವು ಬೆಂಗಳೂರು ತಲುಪುವ ಸಾಧ್ಯತೆ ಇದೆ. ಬಳಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸದ್ಯದ ಮಾಹಿತಿ ಪ್ರಕಾರ, ಬುಧವಾರ ಸ್ಪಂದನಾ ವಿಜಯ್​ ರಾಘವೇಂದ್ರ ಅವರ ಅಂತ್ಯಕ್ರಿಯೆ  ನೆರವೇರಲಿದೆ. ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ತೀರ್ಮಾನಿಸಲಾಗಿದೆ.ವಿಜಯ್​ ರಾಘವೇಂದ್ರ ಅವರದ್ದು ದೊಡ್ಡ ಕುಟುಂಬ. ಡಾ. ರಾಜ್​ಕುಮಾರ್​ ಅವರ ಹತ್ತಿರದ ಸಂಬಂಧಿಗಳಾದ ಅವರ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ಆಗಿದೆ. ಶಿವರಾಜ್​ಕುಮಾರ್​ ಅವರು ಹೈದರಾಬಾದ್​ನಲ್ಲಿ ‘ಭೈರತಿ ರಣಗಲ್​’ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದರು. ಸ್ಪಂದನಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶಿವಣ್ಣ ಬೆಂಗಳೂರಿಗೆ ವಾಪಸ್​ ಹೊರಟಿದ್ದಾರೆ. ವಿಜಯ್​ ರಾಘ​ವೇಂದ್ರ ಅವರ ನಿವಾಸಕ್ಕೆ ಎಲ್ಲರೂ ಆಗಮಿಸುತ್ತಿದ್ದಾರೆ.ಡಾ. ರಾಜ್​ಕುಮಾರ್​ ಅವರ ಕುಟುಂಬಕ್ಕೆ ಒಂದರ ಹಿಂದೊಂದು ಆಘಾತ ಆಗುತ್ತಿದೆ. ಪುನೀತ್​ ರಾಜ್​ಕುಮಾರ್ ನಿಧನದಿಂದ ಈ ಕುಟುಂಬಕ್ಕೆ ತೀವ್ರ ನೋವು ಉಂಟಾಗಿತ್ತು. ಬಳಿಕ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರ ತಂದೆ ರೇವನಾಥ್​ ನಿಧನ ಹೊಂದಿದರು. ಕೆಲವೇ ವಾರಗಳ ಹಿಂದೆ ಪಾರ್ವತಮ್ಮ ಅವರ ಸಂಬಂಧಿ, ಯುವ ನಟ ಸೂರಜ್​ ಅವರು ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಈಗ ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿರುವುದು ನೋವಿನ ಸಂಗತಿ.

ಸ್ಪಂದನಾ ಅಗಲಿಕೆ ಬಗ್ಗೆ ಶ್ರೀಮರಳಿ ಪ್ರತಿಕ್ರಿಯೆ:

ವಿಜಯ್​ ರಾಘವೇಂದ್ರ ಸಹೋದರ ಶ್ರೀಮುರಳಿ ಅವರು ಸ್ಪಂದನಾ ನಿಧನದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ಕರೆ ಮಾಡಿ ತಿಳಿಸಿದರು. ಫ್ಯಾಮಿಲಿ ಜೊತೆ ಅತ್ತಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದರು. ಅಣ್ಣ ಕೂಡ ಈ ಟ್ರಿಪ್​ಗೆ ಅವರ ಜೊತೆ ಸೇರಿಕೊಳ್ಳುವವರಿದ್ದರು. ಅತ್ತಿಗೆ ನಿನ್ನೆ ರಾತ್ರಿ ಮಲಗಿದ್ದವರು ಮತ್ತೆ ಏಳಲೇ ಇಲ್ಲ. ಲೋ ಬಿಪಿ ಆಗಿದ್ದರಿಂದ ಅವರಿಗೆ ಈ ರೀತಿ ಆಗಿದೆ ಅಂತ ತಿಳಿದುಬಂದಿದೆ. ನಾಳೆ ಇನ್ನಷ್ಟು ಮಾಹಿತಿ ನೀಡುತ್ತೇವೆ’ ಎಂದಿದ್ದಾರೆ ಮುರಳಿ.