ಹೊಸಕೋಟೆ: ಡೀಸೆಲ್‌ ಕಳವಿಗೆ ಬಂದವನ ಬಡಿದು ಕೊಂದ ಲಾರಿ ಚಾಲಕರು..!

ಹೊಸಕೋಟೆ(ಜು.27):  ನಿಂತಿದ್ದ ಲಾರಿಗಳಲ್ಲಿ ಡೀಸೆಲ್‌ ಕದಿಯಲು ಹೋದ ವ್ಯಕ್ತಿಯೊಬ್ಬ ಚಾಲಕರ ಥಳಿತಕ್ಕೊಳಗಾಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ. 

ಟ್ರಕ್‌ ಟರ್ಮಿನಲ್‌ ಬಳಿ ನಿಲ್ಲಿಸಿದ್ದ 15ಕ್ಕೂ ಹೆಚ್ಚಿನ ಲಾರಿಗಳಲ್ಲಿ ಮಂಗಳವಾರ ತಡರಾತ್ರಿ ಡೀಸೆಲ್‌ ಕಳವಿಗೆ ಮೂವರು ಬಂದಿದ್ದರು. ಈ ವೇಳೆ ಒಬ್ಬ ಚಾಲಕನಿಗೆ ಎಚ್ಚರವಾಗಿ ಹಾರ್ನ್‌ ಮಾಡುವ ಮೂಲಕ ಇತರೆ ಲಾರಿ ಚಾಲಕರನ್ನು ಎಚ್ಚರಿಸಿ, ಕಳ್ಳರನ್ನು ಹಿಡಿಯಲೆತ್ನಿಸಿದ್ದಾನೆ. ಆಗ ಕಳ್ಳರಲ್ಲಿ ಇಬ್ಬರು ತಪ್ಪಿಸಿಕೊಂಡು ಓಡಿದರೆ, ಒಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಕೈಗೆ ಸಿಕ್ಕವನ ಮೇಲೆ 10ಕ್ಕೂ ಹೆಚ್ಚು ಚಾಲಕರು ಮನಸೋ ಇಚ್ಛೆ ಥಳಿಸಿದ್ದರಿಂದ ಆತ ಪ್ರಜ್ಞೆ ತಪ್ಪಿದ್ದಾನೆ.

ಬೆಳಗ್ಗೆ ಆಟೋದಲ್ಲಿ ಚಾಲಕರು ಆತನನ್ನು ಪೊಲೀಸ್‌ ಠಾಣೆ ಬಳಿ ಕರೆದೊಯ್ದಿದ್ದು, ಆತ ಪ್ರಜ್ಞೆ ತಪ್ಪಿ ನಿತ್ರಾಣಗೊಂಡಿದ್ದನ್ನು ಗಮನಿಸಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಲು ಯತ್ನಿಸಿದ್ದಾರೆ. ಅದಾಗಲೇ ಆ ವ್ಯಕ್ತಿ ಮೃತಪಟ್ಟಿದ್ದನೆನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 10 ಲಾರಿ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.