ಬಾಗಲಕೋಟೆಯಲ್ಲಿ ಕಳ್ಳತನ ಸಾಬೀತು ಪಡಿಸಲು ಹೋಗಿ ಸ್ನೇಹಿತೆಯ ಕೈಗಳನ್ನೇ ಸುಟ್ಟ ಮಹಿಳೆ

ಬಾಗಲಕೋಟೆ: ಮೌಡ್ಯತೆಗೆ ಒಳಗಾಗಿ ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತು ಮೊತ್ತೊಬ್ಬರ ಪ್ರಾಣ ತೆಗೆದಿದ್ದಾರೆ. ಅದೇ ರೀತಿ ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದಲ್ಲಿ ಮಹಿಳೆಯೊಬ್ಬಳು ಮೌಡ್ಯತೆಗೆ ಒಳಗಾಗಿ ತನ್ನ ಸ್ನೇಹಿತೆಯ ಕೈಗಳನ್ನೇ ಸುಟ್ಟಿದ್ದಾಳೆ. ಖಜ್ಜಿಡೋಣಿ ಗ್ರಾಮದ ಶೋಭಾ ಹಂಚಿನಾಳ ಎಂಬುವರ ಮನೆಯಲ್ಲಿ ಬುಧುವಾರ (ಜು.19) ರಂದು ಕಳ್ಳತನವಾಗಿತ್ತು. ಖದೀಮರು ಹಾಡುಹಗಲೇ ಶೋಭಾ ಹಂಚಿನಾಳ ಮನೆಯಲ್ಲಿದ್ದ ತಿಜೋರಿ ಒಡೆದು 7.40 ಲಕ್ಷ ಮೌಲ್ಯದ ಚಿನ್ನವನ್ನು ‌ಕಳ್ಳತನ (Robbery) ಮಾಡಿದ್ದರು.

ಈ ಬಗ್ಗೆ ದೇವರ ಹೇಳಿಕೆ ಹೇಳುವ ತಾಯವ್ವ ಬಳಿ ಹೋಗಿ ನಮ್ಮ ಮನೆ ಕಳ್ಳತ ಮಾಡಿದವರು ಯಾರು ಎಂದು ಶೋಭಾ‌ ಮನೆಯವರು ಕೇಳಿದ್ದರು. ಇದಕ್ಕೆ ತಾಯವ್ವ ಮಾನೆ ನಿನ್ನ ಸ್ನೇಹಿತೆ ಲಕ್ಷ್ಮಿ ಪೆಟ್ಲೂರ (29) ಕಳ್ಳತನ ಮಾಡಿದ್ದಾಳೆ ಎಂದು ಹೇಳಿದ್ದಳು.

ಅಲ್ಲದೇ ಆಕೆ ಕಳ್ಳತನ ಮಾಡಿಲ್ಲ ಅಂದರೆ ಸುಡುವ ಎಣ್ಣೆಯಲ್ಲಿ ಕೈ ಎದ್ದಿ ಪರೀಕ್ಷೆ ಮಾಡಿ ಎಂದಿದ್ದಳು. ತಾಯವ್ವ ಮಾನೆ ಮಾತು ಕೇಳಿದ ಶೋಭಾ ಹಂಚಿನಾಳ ಹಾಗೂ ಕುಟುಂಬಸ್ಥರು, ಸೋಮವಾರ (ಜು.24) ರಂದು ಲಕ್ಷ್ಮಿ ಪೆಟ್ಲೂರ ಅವರಿಗೆ ಕರೆ ಮಾಡಿ ಶೋಭಾ ಮನೆಗೆ ಕರೆಸಿದ್ದಳು.ಮನೆಗೆ ಬಂದ ಲಕ್ಷ್ಮಿ ಅವರಿಗೆ ಶೋಭಾ ಈ ಬಗ್ಗೆ ಪ್ರಶ್ನಿಸಿದ್ದಾಳೆ. ಅದಕ್ಕೆ ಲಕ್ಷ್ಮಿ ನಾನು ಕಳ್ಳತನ ಮಾಡಿಲ್ಲವೆಂದಿದ್ದಾರೆ.

ಅದಕ್ಕೆ ಶೋಭಾ ಹಾಗೂ ಕುಟುಂಬಸ್ಥರು ಮನೆಯಲ್ಲಿ ಸುಡುವ ಎಣ್ಣೆಯಲ್ಲಿ ಲಕ್ಷ್ಮಿ ಕೈ ಎದ್ದಿದ್ದಾರೆ. ಇದರಿಂದ ಲಕ್ಷ್ಮಿ ಅವರ ಎರಡು ಮುಂಗೈಗೆ ತೀರ್ವವಾಗಿ ಗಾಯವಾಗಿದ್ದು, ಕಲಾದಗಿ‌ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಾದಗಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.