ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಬೆಂಗಳೂರು: ಪ್ರೀತಿಸಿದ ಯುವತಿ ಕೈಕೊಟ್ಟ ಹಿನ್ನೆಲೆ ಯುವಕ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಎಸ್‌ಜೆ ನಗರದಲ್ಲಿ ನಡೆದಿದೆ.

ನವೀನ್ ಆತ್ಮಹತ್ಯೆಗೆ ಶರಣಾದ ಭಗ್ನ ಪ್ರೇಮಿ. ಮೂಲತಃ ಚಾಮರಾಜನಗರ ನಿವಾಸಿಯಾದ ನವೀನ್ ಬದುಕು ರೂಪಿಸಿಕೊಳ್ಳುವ ಸಲುವಾಗಿ ಕುಟುಂಬದವರೇ ಬಾಳೆಕಾಯಿ ಮಂಡಿ ಹಾಕಿಕೊಟ್ಟಿದ್ದರು. ಈ ವೇಳೆ ನವೀನ್‌ಗೆ ಯುವತಿಯೊಬ್ಬಳು ಪರಿಚಯವಾಗಿ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದೆ. ಇಬ್ಬರೂ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡಿ ಮದುವೆಯ ಕನಸು ಕೂಡಾ ಕಂಡಿದ್ದರು.

ಈ ವಿಚಾರವನ್ನು ನವೀನ್ ತನ್ನ ಮನೆಯಲ್ಲೂ ತಿಳಿಸಿದ್ದ. ಆದರೆ ಯುವತಿ ಇತ್ತೀಚಿಗೆ ಪ್ರಿಯಕರ ನವೀನ್‌ನನ್ನು ನಿರ್ಲಕ್ಷಿಸಲು ಶುರುಮಾಡಿದ್ದಳು. ಇದರಿಂದ ನೊಂದ ನವೀನ್ ಯುವತಿಯನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ. ಆದರೆ ಯುವತಿ ಮಾತ್ರ ಡೋಂಟ್ ಕೇರ್ ಎನ್ನುವ ರೀತಿ ವರ್ತಿಸಲು ಶುರುಮಾಡಿದ್ದಳು.

ಈ ಮಧ್ಯೆ ಯುವತಿ ಮತ್ತೊಬ್ಬ ಹುಡುಗನ ಜೊತೆಗೆ ಓಡಾಡುತ್ತಿದ್ದಾಳೆ ಎನ್ನುವ ವಿಚಾರ ತಿಳಿದ ನವೀನ್ ಮತ್ತಷ್ಟು ಕೋಪಗೊಂಡಿದ್ದ. ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದಾಳೆ ಎಂದು ಯುವತಿಯ ಕಡೆಯವರಿಗೂ ರಾಜಿ ಸಂಧಾನಕ್ಕೆ ಒತ್ತಾಯಿಸಿದ್ದ. ಈ ಬಗ್ಗೆ ಮನೆಯವರು ಕೂಡಾ ಬುದ್ಧಿ ಹೇಳಿದರೂ ಏನೂ ಪ್ರಯೋಜನವಾಗಲಿಲ್ಲ.

ಕೊನೆಗೆ ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದು ನೊಂದ ಪ್ರಿಯಕರ ನವೀನ್ ಕೊನೆಯದಾಗಿ ಭಾನುವಾರ ಸಂಜೆ ಯುವತಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳೀ ಫೋನ್ ಕಟ್ ಮಾಡಿದ್ದ. ಇದರಿಂದ ಗಾಬರಿಗೊಂಡ ಯುವತಿ ನೂರಕ್ಕೂ ಹೆಚ್ಚು ಬಾರಿ ವಾಪಸ್ ಕರೆ ಮಾಡಿದ್ದಾಳೆ. ಆದರೆ ನವೀನ್ ಫೋನ್ ರಿಸೀವ್ ಮಾಡಿಲ್ಲ. ಬದಲಾಗಿ ಇವರಿಬ್ಬರ ಪ್ರೀತಿ, ಹುಡುಗಿ ಮದುವೆ ಆಗುವುದಾಗಿ ಹೇಗೆ ಮೋಸ ಮಾಡಿದ್ಳು ಎನ್ನುವುದನ್ನು ಡಿಟೇಲ್ ಆಗಿ ಡೆತ್‌ನೋಟಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.