ಕೊಬ್ಬರಿ ಮಾರಾಟ ಮಾಡಲು ಎಪಿಎಂಸಿಯಲ್ಲಿ ರೈತರ ಪರದಾಟ, ನಿಂತಲ್ಲೇ ನಿಂತ ನೂರಾರು ಟ್ರ್ಯಾಕ್ಟರ್

ತುಮಕೂರು: ದೇಶದ ಬೆನ್ನೆಲುಬಾಗಿರುವ ರೈತನಿಗೆ ಇದೀಗ ಸಂಕಷ್ಟ ಬಂದೂದಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಇಲ್ಲದಂತಾಗಿದೆ. ಅದರಂತೆ ಇದೀಗ ತುಮಕೂರು ಜಿಲ್ಲೆಯ ತುರುವೆಕೆರೆ ಎಪಿಎಂಸಿಯಲ್ಲಿ ಕೊಬ್ಬರಿ ಖರೀದಿ ಮಾಡಲು ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದು, ಕೊಬ್ಬರಿ ಮಾರಾಟಕ್ಕೆ ಬಂದ ರೈತರು ಊಟ ನಿದ್ರೆ ಬಿಟ್ಟು ಟ್ರ್ಯಾಕ್ಟರ್ ಬಳಿ ಕಾವಲು ಕಾಯುವಂತಾಗಿದೆ. ಮಾರುಕಟ್ಟೆಗೆ ತಂದು ಕೊಬ್ಬರಿಯನ್ನ ಮಾರಾಟ ಮಾಡಲಾಗದೆ ಕಂಗಾಲಾಗಿರುವ ಕೊಬ್ಬರಿ ಬೆಳೆದ ರೈತರು, ಹಲವು ದಿನಗಳಿಂದ ಎಪಿಎಂಸಿ ಆವರಣದಲ್ಲಿಯೇ ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ನಿಂತಲ್ಲೆ ನಿಂತುಕೊಂಡಿದ್ದಾರೆ.

ದಿನಕ್ಕೊಂದು ಕಾರಣ ಹೇಳಿ ರಿಜೆಕ್ಟ್ ಮಾಡುತ್ತಿರುವ ಅಧಿಕಾರಿಗಳು

ಹೌದು ದಿನಕ್ಕೊಂದ ಕಾರಣ ನೀಡುತ್ತಿರುವ ಕೊಬ್ಬರಿ ಖರೀದಿಕೇಂದ್ರದ ಅಧಿಕಾರಿಗಳು, ಒಮ್ಮೆ ಕೊಬ್ಬರಿ ಕಪ್ಪಾಗುತ್ತಿದೆ ಎಂದು ರಿಜೆಕ್ಟ್ ಮಾಡಿದರೇ, ಇನ್ನೊಮ್ಮೆ ಖರೀದಿಸಲು ಚೀಲಗಳಿಲ್ಲ, ಲಾರಿ ಬಂದಿಲ್ಲ ಎಂದು ಕಾರಣ ಹೇಳುತ್ತಿದ್ದಾರೆ. ಈ ಎಲ್ಲಾ ಹಿನ್ನಲೆ ಕೊಬ್ಬರಿ ಖರೀದಿಸದ ಎಂಪಿಎಂಸಿ ಅಧಿಕಾರಿಗಳ ವಿರುದ್ದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಜಿಲ್ಲಾಧಿಕಾರಿಗಳೆ ನಾವು ರೈತರು, ನಮ್ಮ ಗೋಳು ನೋಡಿ. ಇಂತಹ ಗುಣಮಟ್ಟದ ಕೊಬ್ಬರಿ ಖರೀದಿಸಲು ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದಾರೆ ಎಂದು ತಾವು ತಂದ ಕೊಬ್ಬರಿಯನ್ನ ತೋರಿಸಿ ಗೋಳು ತೋಡಿಕೊಳ್ಳುತ್ತಿದ್ದಾರೆ.

ರೈತರೆಲ್ಲ ನೇಣುಹಾಕಿ ಕೊಳ್ಳಬೇಕಾ?

ಇನ್ನು ರೈತರು ಕೊಬ್ಬರಿ ಬೆಂಬಲ ಬೆಲೆಗಾಗಿ ನಿನ್ನೆ ಬೆಂಗಳೂರಿನ ಪ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದರು. ಎಂಪಿಎಂಸಿಯಲ್ಲಿ ಒಂದು ತಿಂಗಳಿಂದ 200ಕ್ಕೂ ಹೆಚ್ಚು ಕೊಬ್ಬರಿ ತುಂಬಿದ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿದ್ದು, ಹಣಕ್ಕಾಗಿ ಅಧಿಕಾರಿಗಳು ನಾವು ತಂದ ಕೊಬ್ಬರಿಯನ್ನ ಖರೀದಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದರು. ಇನ್ನು ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಜು.27 ಕೊನೆಯ ದಿನವಾಗಿದೆ. ಕೂಡಲೇ ಜಿಲ್ಲಾಧಿಕಾರಿ, ತಹಶಿಲ್ದಾರ್​ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುವಂತೆ ರೈತರ ಮನವಿ ಮಾಡಿಕೊಂಡಿದ್ದಾರೆ.

ಕೊಬ್ಬರಿ ಬೆಂಬಲ ಬೆಲೆ ಖರೀದಿ ವಿಚಾರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್ ‘ ಕೇಂದ್ರ ಸರ್ಕಾರ ನೀಡಿದ್ದ ಗಡುವು ಮುಕ್ತಾಯ ಹೆಚ್ಚುವರಿ ಸಮಯ ನೀಡುವಂತೆ ಕೊಬ್ಬರಿ ಬೆಳೆಗಾರರ ಸಂಘ ಆಗ್ರಹ ಮಾಡುತ್ತಿದ್ದು, ಹೊಸದಾಗಿ ನೋಂದಣಿಗೆ ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಈ ಹಿನ್ನೆಲೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ ಬರೆದಿದ್ದು,  ಈ ನಿಟ್ಟಿನಲ್ಲಿ ರೈತಸಂಘದ ಸದಸ್ಯರು ರಾಜ್ಯದ ಸಂಸದರು, ಕೇಂದ್ರ ಮಂತ್ರಿಗಳ ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು.  ನಿಮ್ಮ ಜೊತೆಗೆ ನಾವೂ ನಿಲ್ಲುತ್ತೇವೆ. ಎಲ್ಲರೂ ಒಟ್ಟಾಗಿ ಹೋಗೋಣ ಎಂದು ತೋಟಗಾರಿಕೆ ಸಚಿವ ಶಿವಾನಂದ ಪಾಟೀಲ್ ವಿಧಾನಸೌಧದಲ್ಲಿ ಹೇಳಿದರು.