ಕಳೆದು ಹೋದ, ರೂ.2 ಲಕ್ಷ ಮೌಲ್ಯದ 20 ಮೊಬೈಲ್ ಪತ್ತೆ ಹಚ್ಚಿದ ಕುಮಟಾ ಪೊಲೀಸರ ಚುರುಕಿನ ಕಾರ್ಯಾಚರಣೆ

ಕುಮಟಾ : ಕುಮಟಾ ಪೊಲೀಸರು ಚುರುಕಿನ ಕಾರ್ಯಚರಣೆಯ ಮೂಲಕ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಮೊಬೈಲ್ ಕಳ್ಳತನವನ್ನು ಬೇಧಿಸಿದ್ದು, ಕಳೆದುಹೋದ ಮೊಬೈಲ್‌ನ್ನು ವಾರಸುದಾರರಿಗೆ ಒಪ್ಪಿಸುವ ಕಾರ್ಯ ಮಾಡಿದ್ದಾರೆ. ಪೊಲೀಸರ ಚುರುಕಿನ ಕಾರ್ಯದ ಬಗ್ಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಕಳೆದ ತಿಂಗಳು ಹೊಲನಗದ್ದೆಯ ಅನಂತ ಹರಿಕಾಂತ ಅವರು ತಮ್ಮ ಸ್ಮಾರ್ಟ್ ಫೋನ್ ಕಳೆದುಕೊಂಡಿದ್ದರು. ಅಲ್ಲದೇ ಹೆಗಡೆಯ ರಮೇಶ ಪಟಗಾರ ಕೂಡ ತಮ್ಮ ಮೊಬೈಲ್ ಕಳೆದುಕೊಂಡಿದ್ದರು. ಮೊಬೈಲ್ ಕಳ್ಳವಾದ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆ ಕೈಗೊಂಡ ಅಪರಾಧ ಪತ್ತೆ ವಿಭಾಗದ ಪೊಲೀಸರು ಕಳೆದುಹೋದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಮೊಬೈಲ್ ಫೋನ್‌ಗಳನ್ನು ಮರಳಿಸಿದ್ದಾರೆ. ಸುಮಾರು ೨ ಲಕ್ಷ ರೂ ಮೌಲ್ಯದ ೨೦ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ ಪೊಲೀಸರು ಮೊಬೈಲ್ ಕಳೆದುಕೊಂಡವರನ್ನು ಠಾಣೆಗೆ ಕರೆಯಿಸಿ, ಭಟ್ಕಳ ಡಿವೈಎಸ್‌ಪಿ ಶ್ರೀಕಾಂತ ಅವರ ಮೂಲಕ ಜಫ್ತು ಪಡಿಸಿಕೊಂಡ ಮೊಬೈಲ್‌ಗಳನ್ನು ವಾರುಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯಕ, ಪಿಎಸ್‌ಐ ನವೀನ್ ನಾಯ್ಕ, ಸುನೀಲ್ ಬಂಡಿವಡ್ಡರ್ ಇತರರು ಇದ್ದರು.