2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!

ಬೆಂಗಳೂರು: ಶಂಕಿತರು ಐವರು ಉಗ್ರರು ಎರಡು ದಿನದೊಳಗೆ ದೊಡ್ಡ ಮಟ್ಟದ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದರು ಎಂಬ ಸ್ಫೋಟಕ ವಿಚಾರವೊಂದು ಉನ್ನತ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

2 ದಿನದೊಳಗೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಒಂದು ದಿನ ತಡವಾಗಿದ್ದರೂ ಬೆಂಗಳೂರಿನಲ್ಲಿ ಬಿಗ್ ಬ್ಲಾಸ್ಟ್ ನಡೆಯೋದನ್ನ ಯಾರೂ ತಡೆಯಲಾಗುತ್ತಿರಲಿಲ್ಲ ಎಂಬ ಶಾಕಿಂಗ್ ಮಾಹಿತಿ ಬಯಲಾಗಿದೆ.

ಐವರ ಬಂಧನ ಸಂಬಂಧ ಪೊಲೀಸ್ ಕಮಿಷನರ್ ಬಿ. ದಯಾನಂದ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಲವೊಂದು ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸೋಕೆ ತಯಾರಿ ಮಾಡುತ್ತಿದ್ದರು. ಸಮಾಜ ಘಾತುಕ ಶಕ್ತಿಗಳನ್ನ ಮಟ್ಟ ಹಾಕಿದ್ದಾರೆ. 7 ಕಂಟ್ರಿ ಮೇಡ್ ಪಿಸ್ತೂಲ್, 45 ಜೀವಂತ ಗಡುಗಳು, ಎರಡು ವಾಕಿಟಾಕಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಪ್ರಾಥಮಿಕ ವಿಚಾರಣೆಯಲ್ಲಿ 2008ರ ಸರಣಿ ಬಾಂಬ್ ಉಗ್ರ ಟಿ ನಜೀರ್ ಜೊತೆ ಹಾಗೂ ಮತ್ತೊಬ್ಬ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರನ ಜೊತೆ ಸಂಪರ್ಕ ಹೊಂದಿದ್ದರು. ಐವರು ಶಂಕಿತರು ಈ ಇಬ್ಬರು ಉಗ್ರರ ಸಂಪರ್ಕಕ್ಕೆ ಸಿಕ್ಕಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿದ್ದರು. ವಿದೇಶದಲ್ಲಿರುವ ಉಗ್ರ ಬ್ಲಾಸ್ಟ್‍ಗೆ ಬೇಕಾದ ವಸ್ತುಗಳ ಪೂರೈಕೆ ಮಾಡುತ್ತಿದ್ದ. ದೇಶ ವಿರೋಧಿ ಶಕ್ತಿಗಳು ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಂಕಿತರ ಮೇಲೆ ಯುಎಪಿಎ ಆಕ್ಟ್ ಜಾರಿ ಮಾಡಲಾಗಿದೆ. ಉಗ್ರ ಟಿ ನಜೀರ್ ಎಲ್‍ಇಟಿ ಸಂಘಟನೆಗೆ ಸೇರಿದ ಉಗ್ರನಾಗಿದ್ದು, ಈತನ ಜೊತೆ ಪರಪ್ಪನ ಅಗ್ರಹಾರ ಜೈಲಿನಿಂದ ಸಂಪರ್ಕ ಬೆಳೆದಿತ್ತು ಎಂದು ವಿವರಿಸಿದರು.

ಮೊದಲ ಬಾರಿ ಜೈಲಿಗೆ ಹೋದಾಗ 18 ತಿಂಗಳು ಜೈಲಲ್ಲಿ ಇದ್ದರು. 2020 ರಲ್ಲಿ ಜೈಲಿಗೆ ಹೋದಾಗ 8 ತಿಂಗಳು ಜೈಲಿಗೆ ಹೋಗಿದ್ದರು. ಈ ವೇಳೆ ಉಗ್ರ ಟಿ ನಜೀರ್ ಸಂಪರ್ಕ ಹೊಂದಿದ್ದಾರೆ. ಶಂಕಿತ ಉಗ್ರರಿಗೆ ಹೊರಗಡೆಯಿಂದ ಫಂಡಿಂಗ್ ಆಗಿದೆ. ಲಷ್ಕರ್ ಎ ತೊಯ್ಬಾದ ಟಿ ನಜೀರ್ ನನ್ನ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಆರ್ ಟಿ ನಗರ ಕೇಸಲ್ಲಿ ಎ1 ಆರೋಪಿಯಾಗಿದ್ದ ಶಂಕಿತ ಉಗ್ರ ಜುನೈದ್ ಅಹಮದ್, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ. ಜುನೈದ್ ಅಹಮದ್ ಹಾಗೂ ಟಿ ನಾಜಿರ್ ನ ಅಣತಿಯಂತೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಲಾಗುತ್ತಿತ್ತು. ಸದ್ಯ ಶಂಕಿತರಿಂದ 12 ಮೊಬೈಲ್ ಜಪ್ತಿ ಮಾಡಲಾಗಿದ್ದು, ಇವರು ಮೆಕ್ಯಾನಿಕ್, ಡ್ರೈವರ್ ರೀತಿಯ ಕೆಲಸ ಮಾಡಿಕೊಂಡಿದ್ದರು.