ಬಿಬಿಎಂಪಿ ಕಾರ್ಯಾಚರಣೆ: ಫುಟ್​ಪಾತ್ ಅತಿಕ್ರಮಣ, ಅನಧಿಕೃತ ಒಎಫ್‌ಸಿ ಕೇಬಲ್‌ಗಳ ತೆರವು

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ Brand Bengaluru ಸಭೆ ನಂತರ ಬಿಬಿಎಂಪಿ ಅಧಿಕಾರಿಗಳು ಫೀಲ್ಡಿಗೆ ಇಳಿದಿದ್ದು, ಅತಿಕ್ರಮಣವಾಗಿದ್ದ ಫುಟ್​ಪಾತ್ ಹಾಗೂ ಅನಧಿಕೃತ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸುತ್ತಿದ್ದಾರೆ. ಒಂದು ವಾರದಲ್ಲಿ ಸುಮಾರು 37.5 ಕಿ.ಮೀ ಅತಿಕ್ರಮಣವನ್ನು ತೆರವುಗೊಳಿಸಿದ್ದಾರೆ. ಬಿಬಿಎಂಪಿ ಎಕ್ಸಿಗಿಟ್ಯೂವ್​ ಇಂಜಿನಿಯರ್ ನೇತೃತ್ವದ ತಂಡ ಫೀಲ್ಡ್​ಗೆ ಇಳಿದಿದ್ದು ಶುಕ್ರವಾರ ಕೆಆರ್​ಪುರಂನ ಬಿಬಿಎಂಪಿ ಕಚೇರಿಯಿಂದ ದೇವಸಂದ್ರ ವೃತ್ತದವರೆಗೆ ಅತಿಕ್ರಮಣಗೊಂಡಿದ್ದ ಫುಟ್​ಬಾತ್​ ಮತ್ತು ಹೋರ್ಡಿಂಗ್​​ಗಳನ್ನು ತೆರವುಗೊಳಿಸಿದರು.

ಟಿಸಿ ಪಾಳ್ಯ 6 ಕಿಮೀ, ಕೆಆರ್​ ಪುರಂ ಆಸ್ಪತ್ರೆಯಿಂದ ಮದ್ರಾಸ್​ ರಸ್ತೆ 3 ಕಿಮೀ, ಕೆಆರ್​ ಬಿಬಿಎಂಪಿ ಕಚೇರಿಯಿಂದ ದೇವಸಂದ್ರ ಸರ್ಕಲ್​ 4.5 ಕಿಮೀ, ಫೋನಿಕ್ಸ್​​ ಮಾಲ್​ದಿಂದ ಐಟಿಪಿಬಿ 4 ಕಿಮೀ, ವರ್ತೂರು ಕೋಡಿಯಿಂದ ಬೆಲ್ತೂರ್​ 4 ಕಿಮೀ, ಮಾರತಹಳ್ಳಿ ಬ್ರಿಡ್ಜ್​​​ನಿಂದ ಬೆಲ್ಲಂದೂರು 4 ಕಿಮೀ, ಅಯ್ಯಪ್ಪ ನಗರದಿಂದ ಗರಪೇಟೆ ಇಂಡಿಯಾ ಸಿಗ್ನಲ್​ 4 ಕಿಮೀ, ಸಿದ್ದಾಪುರದಿಂದ ಗುಂಜರ್​​ 4 ಕಿಮೀ, ಇಬ್ಲೂರ್ ಜಂಕ್ಷನ್​ದಿಂದ ವಿಫ್ರೋ ಗೇಟ್​ 4 ಕಿಮೀ ವರಗೆ ತೆರವುಗೊಳಿಸಲಾಗಿದೆ.

ಪೌರಕಾರ್ಮಿಕರು ಫುಟ್​​ಬಾತ್​​ನಲ್ಲಿ ಹಾಕಲಾಗಿದ್ದ ಬ್ಯಾನರ್ ಮತ್ತು ಹೋರ್ಡಿಂಗ್‌ಗಳನ್ನು ತೆಗೆದುಹಾಕಿದರು. ಅಂಗಡಿಗಳ ಮುಂದೆ ನೇತಾಡುತ್ತಿದ್ದ ಪ್ಲಾಸ್ಟಿಕ್ ಶೀಟ್‌ಗಳು ಮತ್ತು ಕ್ಯಾನೋಪಿಗಳನ್ನು ಸಹ ಕೆಳಗಿಳಿಸಿ ಟ್ರ್ಯಾಕ್ಟರ್‌ಗಳಿಗೆ ತುಂಬಲಾಯಿತು. ಅಲ್ಲದೇ ಬೀದಿ ದೀಪಗಳು ಮತ್ತು ಮರಗಳಿಗೆ ನೇತಾಡುತ್ತಿದ್ದ ಎಲ್ಲಾ ಒಎಫ್‌ಸಿ ಕೇಬಲ್‌ಗಳನ್ನು ತೆಗೆದುಹಾಕಲಾಯಿತು. ಇದರಿಂದ ಆಕ್ರೋಶಗೊಂಡ ಅಂಗಡಿಕಾರರು ಮುಂಚಿತವಾಗಿ ತಿಳಿಸಿದ್ದರೇ ತಾವೇ ತೆಗೆದುಹಾಕುತ್ತಿದ್ದೇವು ಎಂದು ಹೇಳಿದರು.

ಫುಟ್​ಪಾತ್ ಅತಿಕ್ರಮಿಸಿದ ಅಂಗಡಿಗಳಿಗೆ ಬಿಬಿಎಂಪಿ ದಂಡ ವಿಧಿಸಿದೆ. ಅತಿಕ್ರಮಣದ ಆಧಾರದ ಮೇಲೆ 500 ರೂ.ನಿಂದ 5,000 ರೂ.ವರೆಗೆ ದಂಡ ವಿಧಿಸಲಾಯಿತು. ಕೆಆರ್ ಪುರಂ ಉಪವಿಭಾಗದ ವ್ಯಾಪ್ತಿಯಲ್ಲಿ ಈ ರೀತಿ ಉಲ್ಲಂಘಿಸುವವರಿಂದ ಇಲ್ಲಿಯವರೆಗೆ ಸುಮಾರು 80,000 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇವಸಂದ್ರದ ಪ್ರಾವಿಜನ್ ಸ್ಟೋರ್ ಮಾಲೀಕ ನವೀನ್ ಕುಮಾರ್ ಮಾತನಾಡಿ, ಅತಿಕ್ರಮಣ ತೆರವುಗೊಳಿಸುವುದು ಉತ್ತಮ. ಆದರೆ ಏಕಾಏಕಿ ಪ್ರಾರಂಭಿಸಿದ್ದರಿಂದ ಅವ್ಯವಸ್ಥೆಗೆ ಕಾರಣವಾಯಿತು. ನಾನು ಫುಟ್​ಪಾತ್​​ ಕಾಲ್ನಡಿಗೆಯನ್ನು ಅತಿಕ್ರಮಿಸದ ಕಾರಣ ನನಗೆ ಸಮಸ್ಯೆ ಆಗಲಿಲ್ಲ. ಆದರೆ ಇತರ ಅನೇಕ ಇತರ ಅಂಗಡಿಗಳು ಅತಿಕ್ರಮಣ ಮಾಡಿವೆ. ಮೊದಲೇ ಮಾಹಿತಿ ನೀಡಿದ್ದರೆ ಅಂಗಡಿ ಮಾಲೀಕರೇ ಅತಿಕ್ರಮಣ ತೆರವುಗೊಳಿಸುತ್ತಿದ್ದರು ಎಂದರು.

ಹೆಸರು ಹೇಳಲು ನಿರಾಕರಿಸಿದ ಮೆಡಿಕಲ್ ಶಾಪ್ ಮಾಲೀಕರು, ತೆರವು ಕಾರ್ಯಾಚರಣೆ ವೇಳೆ ತಾರತಮ್ಯ ಮಾಡಿದ್ದಾರೆ. ಅತಿಕ್ರಮಣ ಮಾಡಿದ ಕೆಲವು ಅಂಗಡಿಗಳನ್ನು ಹಾಗೇ ಉಳಿಸುತ್ತಿದ್ದಾರೆ. ಇದು ಅನ್ಯಾಯ. ಅವರು ಪಕ್ಷಪಾತವಿಲ್ಲದೆ ಎಲ್ಲಾ ಅತಿಕ್ರಮಣಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.