ಕೆಲವೇ ಸೆಕೆಂಡ್​ಗಳಲ್ಲಿ ಬರೊಬ್ಬರಿ 1.70 ಕೋಟಿ ರೂ. ಮೌಲ್ಯದ ಚಿನ್ನ ಎಗರಿಸಿದ ಖದೀಮರು

ಬೆಂಗಳೂರು, ಜು.15: ಮಹಾನಗರದಲ್ಲಿ ಕಳ್ಳರ ಹಾವಳಿ ಮೀತಿಮೀರಿದೆ. ನಿನ್ನೆಯಷ್ಟೇ ಪೊಲೀಸರ ಸೋಗಿನಲ್ಲಿ ಯುವಕರಿದ್ದ ಬಾಡಿಗೆ ರೂಮಿಗೆ ನುಗ್ಗಿದ ಖದೀಮರು, ಚಾಕು ತೋರಿಸಿ ಹಣ, ಚಿನ್ನ ಕಳ್ಳತನ ಮಾಡಿಕೊಂಡು ಹೋಗಿದ್ದರು. ಇದೀಗ ಸಿನಿಮೀಯ ರೀತಿಯಲ್ಲಿ ಚಿನ್ನವಿರುವ ಬ್ಯಾಗ್​ನ್ನು ಕಳ್ಳರು ದೋಚಿರುವ ಘಟನೆ ಕೆ.ಆರ್​.ಮಾರ್ಕೆಟ್​ ಫ್ಲೈಓವರ್ ಮೇಲೆ ನಡೆದಿದೆ. ವ್ಯಾಪಾರಿಯೊಬ್ಬರು ಬೈಕ್​ನಲ್ಲಿ 1.70 ಕೋಟಿ ಮೌಲ್ಯದ ಚಿನ್ನದ ಬ್ಯಾಗ್​ ತೆಗೆದುಕೊಂಡು ಹೋಗುವಾಗ, ವ್ಯಾಪಾರಿ ಬೈಕ್​ಗೆ ಅಡ್ಡಬಂದ ಇಬ್ಬರು ದುಷ್ಕರ್ಮಿಗಳು ಬೈಕ್​ ನಿಧಾನ ಮಾಡಿಸಿದ್ದಾರೆ. ನಂತರ ನೇರವಾಗಿ ಚಿನ್ನವಿರುವ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳದಲ್ಲಿಲ್ಲ ಸಿಸಿಟಿವಿ ಕ್ಯಾಮೆರಾ

ಇನ್ನು ಈ ಘಟನೆ ನಡೆಯುತ್ತಿದ್ದಂತೆ ಹತ್ತಿರದ ಕಾಟನ್​ಪೇಟೆ ಪೊಲೀಸ್ ಠಾಣೆಗೆ ವ್ಯಾಪಾರಿ ದೂರು ದಾಖಲಿಸಿದ್ದಾರೆ. ಘಟನೆ ಸಂಭಂದ ತನಿಖೆ ಶುರುಮಾಡಿರುವ ಪೊಲೀಸರು, ಸುತ್ತಮುತ್ತಲೂ ಎಲ್ಲಿಯಾದರೂ ಸಿಸಿಟಿವಿ ಕ್ಯಾಮೆರಾ ಇದೆಯೇ ಎಂದೂ ಹುಡುಕಾಡಿದ್ದು, ಘಟನೆ ಸ್ಥಳ ಸೇರಿ ಹತ್ತಿರ ಎಲ್ಲಿಯೂ ಕ್ಯಾಮೆರಾ ಅಳವಡಿಕೆಯಾಗಿಲ್ಲ. ಇದೀಗ ಹಲವಾರು ಅನುಮಾನ ಒಳಗೊಂಡು ತನಿಖೆ ಆರಂಭಿಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ದಿನವೂ ನಗರದಾದ್ಯಂತ ಒಂದಾದರೂ ಇಂತಹ ಕೇಸ್​ಗಳು ಪತ್ತೆಯಾಗುತ್ತಿವೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಇದಕ್ಕೆ ಬ್ರೇಕ್​ ಹಾಕಬೇಕಾಗಿದೆ.