ಪ್ರೀತಿಸಿ ಮದುವೆಯಾಗಿದ್ರು ಪತಿಯನ್ನ ಬಿಟ್ಟು ಪ್ರಿಯಕರನ ಜೊತೆ ವಾಸ; ಸಹಿಸದ ಗಂಡ, ಪತ್ನಿಯನ್ನ ಕೊಂದು ಮಗುವಿನ ಜೊತೆ ಎಸ್ಕೇಪ್

ಬೆಂಗಳೂರು ಗ್ರಾಮಾಂತರ: ಈ ಪೋಟೋದಲ್ಲಿರುವ ಯುವತಿಯ ಹೆಸರು ಭಾರತಿ ಮೂಲತಃ ಮಧುಗಿರಿ ಮೂಲದವಳಾದ ಈಕೆ ಕೆಲಸಕ್ಕೆ ಹೋಗುವ ವೇಳೆ ಹರೀಶ್ ಎಂಬುವವನ ಜೊತೆ ಪರಿಚಯವಾಗಿ, ಪ್ರೀತಿಯ ಬಲೆಗೆ ಬಿದ್ದು ಮದುವೆನೂ ಆಗಿದ್ದಳು. ಜೊತೆಗೆ ಇಬ್ಬರ ಅನೂನ್ಯ ಸಂಸಾರಕ್ಕೆ ಇಬ್ಬರು ಮಕ್ಕಳು ಸಹ ಸಾಕ್ಷಿಯಾಗಿದ್ದು ಗಂಡ ಹೆಂಡತಿ ಇಬ್ಬರು ದುಡಿಯುವುದಕ್ಕೆಂದು ಬೆಂಗಳೂರು ಮತ್ತು ತಮಿಳುನಾಡಿಗೆ ಹೋಗಿ ಬದುಕು ಕಟ್ಟಿಕೊಂಡಿದ್ರು. ಈ ನಡುವೆ ಭಾರತಿಗೆ ತನ್ನ ಹಳೆ ಸೋದರ ಸಂಬಂಧಿ ಗಂಗರಾಜು ಜೊತೆ ಲವ್ವಿಡವ್ವಿ ಶುರುವಾಗಿದ್ದು, ಅಲ್ಲಲ್ಲಿ ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡಿದ್ದ ಗಂಗರಾಜು ಜೊತೆ ಕಳೆದ 12 ದಿನಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮಕ್ಕೆ ಬಂದು, ಅಲ್ಲಿ ನಾವು ಗಂಡ ಹೆಂಡತಿಯೆಂದು ಹೇಳಿ ಬಾಡಿಗೆ ಮನೆಯೊಂದನ್ನ ಪಡೆದು 4 ವರ್ಷದ ಮಗು ಜೊತೆ ವಾಸವಾಗಿದ್ದರು.

ಗಂಡ ಕುಡಿದು ಟೈಟ್​ ಆದ ಎಂದು ಪ್ರಿಯಕರನ ಜೊತೆ ಮಲಗಿಕೊಂಡ ಪತ್ನಿ

ಈ ವಿಚಾರ ತಿಳಿದುಕೊಂಡ ಗಂಡ ಹರೀಶ್ ಮೂರು ದಿನಗಳಿಂದೆ ಗ್ರಾಮಕ್ಕೆ ಬಂದಿದ್ದು, ಮನೆಯಲ್ಲಿದ್ದ ಪತ್ನಿ ಜೊತೆ ಮಾತನಾಡಿ ನಿನ್ನೆ(ಜು.13) ಮನೆಯಲ್ಲೆ ಉಳಿದುಕೊಂಡಿದ್ದಾನೆ. ಈ ವೇಳೆ ಗಂಡ ಕುಡಿದು ಟೈಟ್ ಆಗಿದ್ದಾನೆಂದು, ಗಂಡನ ಮುಂದೆಯೆ ಪ್ರಿಯಕರನ ಜೊತೆ ಕೊಠಡಿಯಲ್ಲಿ ಮಲಗಿದ್ದಾಳೆ. ಅದನ್ನ ಗಂಡ ಹರೀಶ ನೋಡಿದ್ದನಂತೆ. ಹೀಗಾಗಿ ಆಕ್ರೋಶಗೊಂಡ ಹರೀಶ್, ಪತ್ನಿ ಜೊತೆ ಜಗಳ ಮಾಡಿದ್ದಾನೆ. ನಿನ್ನೆ ಸಂಜೆ ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡೆದು ನಂತರ ಕತ್ತು ಹಿಸುಕಿ ಕೊಲೆ ಮಾಡಿ, ಬಳಿಕ ಮಗುವನ್ನ ಕರೆದುಕೊಂಡು ಮನೆಗೆ ಚಿಲಕ ಹಾಕಿ, ನಂತರ ಸೀದಾ ತನ್ನ ಊರಿನತ್ತ ಹೊರಟಿದ್ದಾನೆ.

ಸಂಜೆ ಭಾರತಿಗೆ ಕರೆ ಮಾಡಿದ ಪ್ರಿಯಕರ ಗಂಗರಾಜು ಎಷ್ಟು ಭಾರಿ ಕರೆ ಮಾಡಿದ್ರು, ಪೋನ್ ಪಿಕ್ ಮಾಡದ ಕಾರಣ ಸ್ನೇಹಿತ ಸುರೇಶ್​ನನ್ನ ಮನೆ ಬಳಿಗೆ ನೋಡಲು ಕಳಿಸಿದ್ದಾನೆ. ಈ ವೇಳೆ ಭಾರತಿ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ಕಂಡ ಸುರೇಶ್​, ನಂತರ ಪ್ರಿಯಕರನನ್ನ ಮನೆಗೆ ಕರೆಸಿಕೊಂಡು ಮನೆಯಲ್ಲಿ ಕೂಡಿ ಹಾಕಿ ಮನೆ ಮಾಲೀಕರ ಸಹಾಯದದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಿಯಕರನನ್ನ ವಶಕ್ಕೆ ಪಡೆದು ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದಾರೆ.

ಮೃತಳ ಸಂಬಂಧಿಕರ ಆಕ್ರೋಶ

ಇನ್ನು ಪ್ರಿಯಕರ ಗಂಗರಾಜುಗೆ ಈಗಾಗಲೆ ಎರಡು ಮದುವೆಯಾಗಿ ಇಬ್ಬರನ್ನು ಕೊಲೆ ಮಾಡಿದ್ದು ಇದೀಗ ನಮ್ಮ ಮಗಳನ್ನು ಬಲಿಪಡೆದುಕೊಂಡಿದ್ದಾನೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿದ್ರು, ಪರಸಂಗದ ಸಹವಾಸಕ್ಕೆ ಬಿದ್ದ ಸುಂದರಿ ಪ್ರೀತಿಸಿ ಮದುವೆಯಾದವನಿಂದಲೇ ಕೊಲೆಯಾಗಿ ಹೋಗಿದ್ದಾಳೆ. ಮಾಡಿದ ತಪ್ಪಿಗೆ ಗಂಡ ಜೈಲು ಸೇರಿದ್ರೆ, ಪತ್ನಿ ಪರಲೋಕ ಸೇರಿಕೊಂಡಿದ್ದಾಳೆ. ಈ ಮಧ್ಯೆ ಏನು ತಿಳಿಯದ ಇಬ್ಬರು ಕಂದಮ್ಮಗಳು ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿ ಪ್ರೀತಿ ಕಳೆದುಕೊಂಡು ಅನಾಥವಾಗಿದ್ದು ನಿಜಕ್ಕೂ ದುರಂತ.