ತಿಪ್ಪೇರುದ್ರಪ್ಪ ಕೇಸ್ ಬಳಿಕ ಎಚ್ಚೆತ್ತ ಭದ್ರತಾ ಸಿಬ್ಬಂದಿ: ವಿಧಾನಸೌಧ ಪ್ರವೇಶ​ಕ್ಕೆ ನಕಲಿ ಪಾಸ್​ ಬಳಕೆ

ಬೆಂಗಳೂರು: ಜು.7 ರಂದು ರಾಜ್ಯ ಬಜೆಟ್​ ಮಂಡನೆ ವೇಳೆ ತಿಪ್ಪೇರುದ್ರಪ್ಪ ಎಂಬ ವ್ಯಕ್ತಿ ಸದನದ ಒಳಗೆ ಪ್ರವೇಶಿಸಿ, ಶಾಸಕರ ಸ್ಥಾನದಲ್ಲಿ ಕೂತಿದ್ದು ಭದ್ರತಾ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ಇದಾದ ನಂತರ ಎಚ್ಚೆತ್ತುಕೊಂಡ ಪೊಲೀಸರು ವಿಧಾನಸೌಧದಲ್ಲಿನಕಲಿ ಪಾಸ್​​ಗಳ ಹಾವಳಿ ಜಾಲವನ್ನು ಪತ್ತೆ ಹಚ್ಚಿದ್ದಾರೆ. ಈ ನಕಲಿ ಪಾಸ್​ಗಳನ್ನು ಬಳಸಿ ವಿಧಾನಸೌಧದ ಒಳಗೆ ಆಗಮಿಸುತ್ತಿರುವವರನ್ನು ತಡೆದಿದ್ದಾರೆ.

ಹೌದು ವಿಧಾನಸೌಧ ಭದ್ರತೆ ಗಂಭೀರವಾಗಿ ಪರಿಗಣಿಸಿದ ಭದ್ರತಾ ಪೊಲೀಸರು, ವಿಧಾನಸೌಧಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡುತ್ತಿದ್ದಾರೆ. ಕೇವಲ ನಾಲ್ಕೇ ದಿನದಲ್ಲಿ ಬರೋಬ್ಬರಿ ಮುನ್ನೂರಕ್ಕು ಹೆಚ್ಚು ನಕಲಿ ಪಾಸ್ ಪತ್ತೆಹಚ್ಚಿದ್ದಾರೆ. ಅಧಿಕೃತ ಪಾಸ್​ಗಳನ್ನು ಕಲರ್ ಜೆರಾಕ್ಸ್, ಓಲ್ಡ್ ಪಾಸ್​ಗಳು, ಅವಧಿ ಮುಗಿದಿರುವ ಪಾಸ್​ಗಳು, ಮತ್ತು ವಾಹನಗಳ ನಕಲಿ ಪಾಸ್​​ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಧಾನಸೌದಕ್ಕೆ ಎಂಟ್ರಿಯಾಗುವ ಎಲ್ಲಾ ಗೇಟ್​ಗಳಲ್ಲಿ ಪ್ರತಿಯೊಬ್ಬರನ್ನು ಪರಿಶೀಲನೆ ಮಾಡುತ್ತಿದ್ದಾರೆ. ನಕಲಿ ಪಾಸ್ ಬಳಸಿ‌ ವಿಧಾನಸೌಧ ಒಳ ಪ್ರವೇಶ ಮಾಡುತ್ತಿದ್ದವರಿಗೆ ತಡೆದಿದ್ದಾರೆ. ಇದೀಗ ಪೊಲೀಸರು ಅವಧಿ‌ ಮುಗಿದಿರುವ ಪಾಸ್, ಕಲರ್ ಜೆರಕ್ಸ್ ಪಾಸ್​ಗಳನ್ನು ಸೀಜ್ ಮಾಡಿದ್ದಾರೆ. ಹಲವು ರಾಜಕಾರಣಿಗಳ ಬೆಂಬಲಿಗರಿಂದ ನಕಲಿ ಪಾಸ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಸದ್ಯ ನಕಲಿ ಪಾಸ ಬಳಸುತ್ತಿದ್ದ ಎಲ್ಲರ ಮಾಹಿತಿ ಸಂಗ್ರಹಿಸಿದ್ದಾರೆ.

ಇನ್ನು ಮಾಜಿ ಎಂಎಲ್ಎ, ಎಂಎಲ್​​ಸಿ ಪಾಸ್​ಗಳೇ ನಕಲಿಯಾಗಿದ್ದು ಆಘಾತಕಾರಿ ಸಂಗತಿಯಾಗಿದೆ. ಇದೀಗ ಪೊಲೀಸರು 300 ಕ್ಕೂ ಹೆಚ್ಚು ನಕಲಿ ಪಾಸ್​ಗಳನ್ನು ವಶಕ್ಕೆ ಪಡೆದಿದ್ದು, ಈ ನಕಲಿ ಪಾಸ್​ಗಳ ಹಿಂದಿನ ಉದ್ದೇಶ ಏನಾಗಿತ್ತು ಎಂದು ತನಿಖೆ ನಡೆಸುತ್ತಿದ್ದಾರೆ.