ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕಾರು ತಡೆದು ಹಣ, ಚಿನ್ನದ ಸರ ಲೂಟಿ ಮಾಡಿದ ಖದೀಮರು

ರಾಮನಗರ: ಕಾರು ತಡೆದು ‌ನಿಲ್ಲಿಸಿ ಹಣ, ಚಿನ್ನದ ಸರ ಲೂಟಿ ಮಾಡಿದ ಘಟನೆ ಬೆಂಗಳೂರು- ಮೈಸೂರು ಹೆದ್ದಾರಿ ಯ ಚೆನ್ನಪಟ್ಟಣ ಸಮೀಪದ ಕನ್ನಮಂಗಲ‌ ಬ್ರಿಡ್ಜ್ ಬಳಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ಧನುಷ್ ಎಂಬುವವರು ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದರು. ಈ ವೇಳೆ ಕನ್ನಮಂಗಲ ಬ್ರಿಡ್ಜ್ ಬಳಿ ಎರಡು ಬೈಕ್​ಗಳಲ್ಲಿ ಹಿಂದಿನಿಂದ ಬಂದ ನಾಲ್ಕು ಅಪರಿಚಿತರು ಕಾರು ತಡೆದು‌ ನಿಲ್ಲಿಸಿ, ಚಾಕು ತೋರಿಸಿ ಹಲ್ಲೆ ಮಾಡಿ ಬರೊಬ್ಬರಿ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ, ಹಣ ದರೋಡೆ ಮಾಡಿದ್ದಾರೆ.

ನಾವು ಪೊಲೀಸರು ತಪಾಸಣೆ ಮಾಡ್ಬೇಕು ಎಂದು ಅವಾಜ್ ಹಾಕಿ ದರೋಡೆ

ಹೌದು ಇದೇ ತಿಂಗಳ ಜುಲೈ 7 ರ ರಾತ್ರಿ 8 ಗಂಟೆಗೆ‌ ನಡೆದಿರುವ ಘಟನೆ ಇದಾಗಿದ್ದು, ನಾವು ಪೊಲೀಸರು ತಪಾಸಣೆ ಮಾಡ್ಬೇಕು ಎಂದು ಅವಾಜ್ ಹಾಕಿ ಧನುಷ್ ಮುಖಕ್ಕೆ ಗುದ್ದಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಕೊರಳಲಿದ್ದ 28 ಗ್ರಾಂ ಚಿನ್ನದ ಸರ, ಹಣವನ್ನ ಎಗರಿಸಿ ಎಸ್ಕೇಪ್​ ಆಗಿದ್ದಾರೆ. ಘಟನೆ ಬಳಿಕ ದಿಕ್ಕು ತೋಚದೆ ಸುಮ್ಮನಿದ್ದ ಧನುಷ್‌, ಬಳಿಕ ಕುಟುಂಬದವರ ಜತೆ ಚರ್ಚಿಸಿ ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.