ಇಟ್ಟಿಗೆಯಿಂದ ಜಜ್ಜಿ ಗರ್ಭಿಣಿ ಹತ್ಯೆ – ಆರೋಪಿಗಳು ಅರೆಸ್ಟ್

ಲಕ್ನೋ: ಇಟ್ಟಿಗೆಯಿಂದ ಜಜ್ಜಿ ಗರ್ಭಿಣಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದ್ದು, ಕೊಲೆಯಲ್ಲಿ (Murder) ಭಾಗಿಯಾದ ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ರಾಂಬಿರಿ ಕೊಲೆಯಾದ ಮಹಿಳೆಯಾಗಿದ್ದು, ಆರೋಪಿಗಳಾದ ಮಹಿಳೆಯ ಪ್ರಿಯಕರ ಆದೇಶ್ ಮತ್ತು ಆತನ ಗೆಳೆಯರಾದ ದೀಪಕ್, ಆರ್ಯನ್, ಸಂದೀಪ್ ಮತ್ತು ರೋಹಿತ್‌ನನ್ನು ಬಂಧಿಸಲಾಗಿದೆ.

ರಾಂಬಿರಿ 2015ರಲ್ಲಿ ವಿನೋದ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಯಾದ ಒಂದು ವರ್ಷದ ಬಳಿಕ ರಾಂಬಿರಿ ಆಕೆಯ ಗಂಡನಿಂದ ಬೇರೆಯಾಗಿ ತನ್ನ ತಂದೆಯ ಮನೆಯಲ್ಲಿ ವಾಸವಿದ್ದಳು. ಬಳಿಕ ಆದೇಶ್ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿದೆ.

ರಾಂಬಿರಿ ಆದೇಶ್‌ನಿಂದ ಗರ್ಭವತಿಯಾದ ಬಳಿಕ ತನ್ನನ್ನು ಮದುವೆಯಾಗುವಂತೆ ಆದೇಶ್‌ನನ್ನು ಒತ್ತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಆದೇಶ್ ಆಕೆಯನ್ನು ಕೊಲ್ಲುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದಾನೆ. ಬಳಿಕ ಜೂನ್ 2ರಂದು ಆಕೆಗೆ ಕರೆ ಮಾಡಿ ತನ್ನ ಮನೆಗೆ ಬರುವಂತೆ ಆದೇಶ್ ಹೇಳಿದ್ದಾನೆ. ಆಕೆ ಮನೆಗೆ ಬಂದ ಬಳಿಕ ಆದೇಶ್ ಮತ್ತು ಆತನ ಸ್ನೇಹಿತರು ಸೇರಿಕೊಂಡು ಇಟ್ಟಿಗೆಯಿಂದ ಜಜ್ಜಿ ಹತ್ಯೆಗೈದು ಬಳಿಕ ಆಕೆಯ ಶವವನ್ನು ಜಮೀನೊಂದರಲ್ಲಿ ಎಸೆದು ಪರಾರಿಯಾಗಿದ್ದರು. 

ಘಟನೆಯ ಬಳಿಕ ಮಹಿಳೆಯ ಕುಟುಂಬಸ್ಥರು ಆಕೆ ಕೊಲೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಕೊಲೆಯಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.